ಮಕ್ಕಳಿಗೆ ಎಲ್ಲವನ್ನೂ ನೀಡುವ ಮುಂಚೆ ಯೋಚಿಸುವಂತೆ ಪೋಷಕರಿಗೆ ಸಲಹೆ ನೀಡಿದ ಸಿಂಘಾನಿಯಾ
ಮುಂಬಯಿ : ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರ ತಂದೆ ವಿಜಯ್ಪತ್ ಸಿಂಘಾನಿಯಾ ತಮ್ಮ ಆಸ್ತಿಯನ್ನು ಮಗನಿಗೆ ಹಸ್ತಾಂತರಿಸುತ್ತಿರುವುದಕ್ಕೆ ಇದೀಗ ಹತಾಶೆ ವ್ಯಕ್ತಪಡಿಸಿದ್ದಾರೆ. ಬ್ಯುಸಿನೆಸ್ ಟುಡೆಯೊಂದಿಗೆ ಮಾತನಾಡಿರುವ ವಿಜಯ್ಪತ್ ಸಿಂಘಾನಿಯಾ ನನ್ನ ಬಳಿ ಈಗ ಏನೂ ಇಲ್ಲ. ಎಲ್ಲವನ್ನೂ ಮಗನಿಗೆ ಕೊಟ್ಟೆ. ಆದ್ರೆ ಅದೇನೋ ತಪ್ಪಿ ನನ್ನ ಬಳಿ ಸ್ವಲ್ಪ ಹಣ ಉಳಿದಿದ್ದು ನಾನು ಆ ಹಣದಿಂದಾಗಿ ಇಂದು ಬದುಕುತ್ತಿದ್ದೇನೆ. ಅದಲ್ಲವಾಗಿದ್ದರೆ ನಾನು ಇಷ್ಟೊತ್ತಿಗೆ ಬೀದಿಯಲ್ಲಿರುತ್ತಿದೆ ಎಂದವರು ತಿಳಿಸಿದ್ದಾರೆ.
ರೇಮಂಡ್ ಕಂಪನಿಯ ಒಡೆಯ ಗೌತಮ್ ಸಿಂಘಾನಿಯಾ ಅವರು ಕಳೆದ ವಾರ ಪತ್ನಿ ನವಾಜ್ ಮೋದಿಯಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೆ ವಿಜಯ್ಪತ್ ಹೇಳಿಕೆ ಭಾರಿ ಸುದ್ದಿಗೆ ಗ್ರಾಸವಾಗಿದೆ.
ಮಗನಿಗೆ ಎಲ್ಲಾ ಆಸ್ತಿಯನ್ನು ಹಸ್ತಾಂತರಿಸಿ ವಿಷಾದ ವ್ಯಕ್ತಪಡಿಸಿರುವ ವಿಜಯ್ಪತ್, ಪೋಷಕರು ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡುವ ಮೊದಲು ಯೋಚಿಸಬೇಕು. ಆಸ್ತಿಯನ್ನು ಮಕ್ಕಳಿಗೆ ಕೊಡಬೇಡಿ ಎಂದು ಹೇಳುತ್ತಿಲ್ಲ. ನಿಮ್ಮ ಸಾವಿನ ಅನಂತರ ಮಾತ್ರ ಅವರಿಗೆ ಎಲ್ಲ ಆಸ್ತಿ ದೊರೆಯುವಂತಾಗಬೇಕು. ನಿಮ್ಮ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ಪೂರ್ತಿ ಆಸ್ತಿ ಮಕ್ಕಳಿಗೆ ನೀಡಬೇಡಿ, ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗಬಹುದು ಎಂದವರು ಪೋಷಕರಿಗೆ ಸಲಹೆ ನೀಡಿದ್ದಾರೆ.









































































