2019ರ ಸೋಲಿನ ಸೇಡು ತೀರಿಸುವ ತವಕದಲ್ಲಿ ಟೀಂ ಇಂಡಿಯಾ
ಮುಂಬಯಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಇಂದು ನಡೆಯಲಿದ್ದು, ಈ ಪಂದ್ಯಕ್ಕಾಗಿ ಮುಂಬಯಿಯ ವಾಂಖೇಡೆ ಸ್ಟೇಡಿಯಂ ಸಜ್ಜಾಗಿದೆ. ಲೀಗ್ ಹಂತದ 9 ಪಂದ್ಯಗಳಲ್ಲಿ ಒಂಬತ್ತನ್ನೂ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಇದೀಗ ನಿಜವಾದ ಪರೀಕ್ಷೆ ಪ್ರಾರಂಭವಾಗಿದೆ. ಮೊದಲ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದು ಕೂಡ ಹೇಳಬಹುದು. ಯಾಕೆಂದರೆ ಕಿವೀಸ್ ವಿರುದ್ಧ 2019ರ ವಿಶ್ವಕಪ್ ಸೆಮಿ-ಫೈನಲ್ನಲ್ಲಿ ಭಾರತ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಈಗ ಮತ್ತೊಮ್ಮೆ ಉಭಯ ತಂಡಗಳು ಸೆಮಿಫೈನಲ್ನಲ್ಲಿ ಸೆಣೆಸಾಟ ನಡೆಸಲು ಸಜ್ಜಾಗುತ್ತಿವೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭಾರತ ಅತ್ಯಂತ ಬಲಿಷ್ಠ ತಂಡವಾಗಿದೆ. ಮೆನ್ ಇನ್ ಬ್ಲೂ ಗುಂಪು ಹಂತದಲ್ಲಿ ಒಂದೇ ಒಂದು ಸೋಲು ಕಾಣಲಿಲ್ಲ. ಎಲ್ಲ ಪಂದ್ಯವನ್ನು ಸುಲಭವಾಗಿ ಜಯಿಸಿದ್ದಾರೆ. ತಂಡದಲ್ಲಿ ಬದಲಾವಣೆ ಮಾಡಿದ್ದು ಕೂಡ ಕಡಿಮೆ. ಆದರೆ, ಈಗ ಸೆಮೀಸ್ ಕದನಕ್ಕೆ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ಭಾರತವನ್ನು ಒಂದು ಬಾರಿ ಎದುರಿಸಿದೆ. ಹೀಗಾಗಿ ಭಾರತದ ಬೌಲರ್ಗಳ ಕೆಲ ವರ್ಮವನ್ನು ಅವರು ಅರಿತಿರಬಹುದು. ಇದಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ಹೊಸ ಆಟಗಾರ ಬರಬಹುದು.































