ಕಾರ್ಕಳ : ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ, ಉಪಾಧ್ಯಕ್ಷರಾಗಿ ತಾರಾ ಆಯ್ಕೆಯಾಗಿದ್ದಾರೆ. ಆ. 18 ರಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಚುನಾವಣಾಧಿಕಾರಿಯಾಗಿ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಅನಂತನಾರಾಯಣ ಭಟ್ಕಳ್ ಕಾರ್ಯನಿರ್ವಹಸಿದರು.
ಪಂಚಾಯತ್ ಚುನಾವಣೆಯಲ್ಲಿ 15 ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಏಕೈಕ ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೀಪಾ ಕಳೆದ 15 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಉಳಿದಂತೆ 14 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಈ ಪೈಕಿ ಲೋಕೇಶ್ ಎಂಬವರು ಇಂದು ಆಯ್ಕೆ ಪಕ್ರಿಯೆಯಲ್ಲಿ ಗೈರು ಹಾಜರಾಗಿದ್ದರು. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕೆಟಗರಿಗೆ ಒಲಿದಿದ್ದು, ಪಕ್ಷ ಸುಮಿತ್ ನಲ್ಲೂರು ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತೀರ್ಮಾನಿಸಿತ್ತು. ಆದರೆ, ಬಂಡಾಯ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಶೋಕ್ ಪೂಜಾರಿ 7 ಸುಮಿತ್ ನಲ್ಲೂರು 6 ಮತಗಳನ್ನು ಪಡೆದು 1 ಮತಗಳ ಅಂತರದಲ್ಲಿ ಅಶೋಕ್ ಪೂಜಾರಿ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ನಿಗದಿಯಾಗಿದ್ದು, ತಾರಾ ಅವರು ಪರಿಶಿಷ್ಟ ಪಂಗಡದ ಏಕೈಕ ಸದಸ್ಯರಾಗಿದ್ದಾರೆ.


































