ಚುರುಕುಗೊಂಡ ಸಿಐಡಿ ತನಿಖೆ
ಉಡುಪಿ : ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಂದು ಹುಡುಗಿಯರು ಶೌಚಾಲಯದಲ್ಲಿರುವಾಗ ವೀಡಿಯೋ ಚಿತ್ರೀಕರಣ ಮಾಡಿದ ಪ್ರಕರಣವನ್ನು ಸಿಐಡಿಗೊಪ್ಪಿಸಿದ ಬಳಿಕ ತನಿಖೆ ಚುರುಕುಗೊಂಡಿದ್ದು, ಇಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೇ (ಎಡಿಜಿಪಿ) ಉಡುಪಿಗೆ ಆಗಮಿಸಲಿದ್ದಾರೆ. ಎಡಿಜಿಪಿ ಮನೀಷ್ ಖರ್ಬಿಕ್ ಉಡುಪಿಗೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರವೇ ಸಿಐಡಿ ತಂಡ ಉಡುಪಿಗೆ ಆಗಮಿಸಿ ತನಿಖೆ ಶುರು ಮಾಡಿದೆ. ಬುಧವಾರ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಖಾಧಿಕಾರಿ ಅಂಜುಮಾಲಾ ನಾಯಕ್ ಕಾಲೇಜಿಗೆ ಭೀಟಿ ನೀಡಿ ತನಿಖೆ ನಡೆಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯರೂ ಈ ಸಂದರ್ಭದಲ್ಲಿ ಜತೆಗಿದ್ದರು.
ಮೊಬೈಲ್ ಫಾರೆನ್ಸಿಕ್ ಸಯನ್ಸ್ ಲ್ಯಾಬೋರೇಟರಿ ಕೂಡ ಉಡುಪಿಗೆ ಬಂದಿದೆ. ಇದರ ತನಿಖಾಧಿಕಾರಿಗಳು ವೈಜ್ಞಾನಿಕ ಸಾಕ್ಷ್ಯಗಳನ್ನು ಹುಡುಕುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿಯನ್ನು ಪ್ರಶ್ನಿಸಿ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಗೊಂಬೆಯನ್ನು ಬಳಸಿ ಘಟನೆಯನ್ನು ಪುನರ್ ಸೃಷ್ಟಿಸಿ ತನಿಖೆ ಮಾಡಲಾಗಿದೆ. ಇದಕ್ಕಾಗಿ ಆಳೆತ್ತರದ ಗೊಂಬೆಗಳನ್ನು ತರಲಾಗಿದೆ.































