ಕಾರ್ಕಳ : ಕಳೆದ 40 ವರ್ಷಗಳಿಂದ ಛಾಯಾಗ್ರಾಹಕ ಮತ್ತು ವಿಡಿಯೋ ಗ್ರಾಫರ್ ಆಗಿ ಹಾಗೂ 17 ವರ್ಷಗಳಿಂದ ವರದಿಗಾರನಾಗಿ ಕಾರ್ಯನಿರ್ಹಿಸುತ್ತಿರುವ ಕೆ.ಎಂ.ಖಲೀಲ್ ಅವರು ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕರುನಾಡ ರತ್ನ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಜು. 23 ರಂದು ಬೆಂಗಳೂರಿನ ಸುಚಿತ್ರ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಡಾ.ಬಿ.ಎನ್.ಹೊರಪೇಟಿ ತಿಳಿಸಿದ್ದಾರೆ.
ಖಲೀಲ್ ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಮಾಜಿ ಅಧ್ಯಕ್ಷರಾಗಿದ್ದಾರೆ. ಕಾರ್ಕಳ ತಾಲೂಕು ಜಮೈತುಲ್ ಫಲದಲ್ಲಿ 10 ವರ್ಷಗಳಿಂದ ಪತ್ರಿಕಾ ಕಾರ್ಯದರ್ಶಿಯಾಗಿ ಹಾಗೂ ನಾಲ್ಕು ವರ್ಷಗಳಿಂದ ಸ್ಥಳೀಯ ಆಯಿಷ ಮಸೀದಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೋತ್ಸವ ಸಮಿತಿ ಕುರ್ಪಾಡಿ ಅಜೆಕಾರು ನಡೆಸಿದ ನಡೆಸಿದ 24 ನೇ ಗ್ರಾಮೋತ್ಸವ ಮತ್ತು ಮೂರನೇ ಆದಿ ಗ್ರಾಮೋತ್ಸವ ಸಾಹಿತ್ಯ ಸಮ್ಮೇಳನದಲ್ಲಿ ಆದಿ ಗ್ರಾಮೋತ್ಸವ ಯುವ ಸಿರಿ ಗೌರವ ಹಾಗೂ 2022ರಲ್ಲಿ ಕಿನ್ನಿಗೋಳಿಯ ಯುಗಪುರುಷ ಮತ್ತು ಕಥಾ ಬಿಂದು ಪ್ರಕಾಶನ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ಕಾವ್ಯ ಸಂಭ್ರಮದಲ್ಲಿ ಕರ್ನಾಟಕ ಸಾಧನ ರತ್ನ ಪ್ರಶಸ್ತಿ ಪಡೆದಿದ್ದರು. ಖಲೀಲ್ ಅವರಿಗೆ ಪ್ರಶಸ್ತಿ ಸಿಗುತ್ತಿರುವುದು ಗ್ರಾಮೀಣ ಪ್ರದೇಶದ ಮಾಧ್ಯಮ ಮಿತ್ರರಿಗೆ ಸಲ್ಲುವ ಗೌರವ ಎಂದು ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಡಾ. ಶೇಖರ ಅಜೆಕಾರು ಅಭಿನಂದಿಸಿದ್ದಾರೆ.































