ಕಾರ್ಕಳ : ಸಕಾಲ ಜಾರಿಗೆ ಬಂದು 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸರಕಾರಿ ಇಲಾಖೆಗಳ ವತಿಯಿಂದ ಎ. 20ರಂದು ಬಂಡಿಮಠ ಬಸ್ ನಿಲ್ದಾಣ ಬಳಿಯಿಂದ ಮಿನಿ ವಿಧಾನ ಸೌಧ ತನಕ ಜಾಥಾ ನಡೆಯಿತು.
ಬಳಿಕ ಮಾತನಾಡಿದ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಸಕಾಲ ಜಾರಿಯಾದ ಬಳಿಕ ಕಡತ ವಿವೇವಾರಿ ವೇಗವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಈವರೆಗೆ 23 ಕೋಟಿ ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಶೇ. 99.99ರಷ್ಟು ವಿಲೇವಾರಿಯಾಗಿದೆ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಸಕಾಲ ಯೋಜನೆಯಿಂದ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನವಾಗಿದ್ದು, ದಶಮಾನೋತ್ಸವದ ಈ ಸಂದರ್ಭದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರದ ಮಾರ್ಗದರ್ಶನದಂತೆ ಜಾಥಾ ನಡೆಸಲಾಗಿದೆ ಎಂದರು.
ತಾ.ಪಂ. ಇಒ ಗುರುದತ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಸೋಮಶೇಖರ್, ಮೆಸ್ಕಾಂ ಎಇಇ ದಿಲೀಪ್ ಸೇರಿದಂತೆ 32 ಸರಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಕಳ ಗ್ರಾಮ ಕರಣಿಕ ರಿಜ್ವಾನ್ ಕಾರ್ಯಕ್ರಮ ನಿರ್ವಹಿಸಿದರು.





























