ದಿಲ್ಲಿ, ಅ.5 : ಕೆಂದ್ರ ಸರಕಾರ ಶಾಲೆಗಳನ್ನು ತೆರೆಯಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಶಾಲೆಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿವೆ. ಇದೇ ವೇಳೆ ಕೆಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಶಾಲೆಗಳನ್ನು ಪ್ರಾರಂಭಸಿದರೂ ಮಕ್ಕಳ ಹಾಜರಿಯನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಹಾವಳಿ ಇನ್ನೂ ಕಡಿಮೆಯಾಗದಿರುವ ಕಾರಣ ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವುದಿಲ್ಲ. ಪಾಲಕರ ಮತ್ತು ಮಕ್ಕಳ ಪ್ರತಿಸ್ಪಂದನೆಯನ್ನು ನೋಡಿಕೊಂಡು ಕ್ರಮೇಣ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ ಸಚಿವರು.
ಪಾಲಕರ ಅನುಮತಿ ಪತ್ರ ಕಡ್ಡಾಯ

ಶಾಲೆಗಳು ಆರಂಭವಾದರೂ ಮಕ್ಕಳು ಶಾಲೆಗೆ ಬರಬೇಕಾದರೆ ಪಾಲಕರು ಸಹಿ ಹಾಕಿದ ಅನುಮತಿ ಪತ್ರವನ್ನು ಕೊಡಬೇಕು. ಹೆತ್ತವರ ಲಿಖಿತ ಅನುಮತಿ ಇದ್ದರೆ ಮಾತ್ರ ಮಕ್ಕಳು ನಿಯಮಿತವಾಗಿ ಶಾಲೆಗೆ ಬರಬಹುದು ಎಂಬ ನಿಯಮವನ್ನು ರಚಿಸಲಿದ್ದೇವೆ ಎಂದು ಹರ್ಷವರ್ಧನ್ ಹೇಳಿದ್ದಾರೆ.






































































