ನಟಿ ಮೀನಾ ಕುಮಾರಿ ಅವರು ಕಮಲ್ ಅಮ್ರೋಹಿಯನ್ನು ವಿವಾಹವಾಗಿದ್ದರೂ ರಾಜೇಂದ್ರ ಕುಮಾರ್, ರಾಜ್ ಕುಮಾರ್, ಪ್ರದೀಪ್ ಕುಮಾರ್ , ಧರ್ಮೇಂದ್ರ ಮತ್ತು ಭರತ್ ಭೂಷಣ್ ರೊಂದಿಗೂ ಅಫೇರ್ ಹೊಂದಿದ್ದರು.
ಪ್ರೇಮ್ ನಾಥ್ ಮಧುಬಾಲಾರಿಗೆ ಪ್ರಪೋಸ್ ಮಾಡಿದ್ದರು.ಆದರೆ ಆಕೆ ಅದನ್ನು ತಿರಸ್ಕರಿಸಿದ್ದರು.ಪ್ರದೀಪ್ ಕುಮಾರ್ ಮತ್ತು ಭರತ್ ಭೂಷಣ್ ರಿಂದಲೂ ಆಕೆಗೆ ಪ್ರಪೋಸ್ ಬಂದಿತ್ತು.ಆದರೆ ಆಕೆ ಮಾತ್ರ ಕಿಶೋರ್ ಕುಮಾರ್ ಗೆ ಪ್ರಪೋಸ್ ಮಾಡಿದ್ದರು.
ಮಧುಬಾಲಾ ದಿಲೀಪ್ ಕುಮಾರ್ ರಿಂದ ದೂರವಾಗಲು ಕಾರಣವಾದದ್ದು ಬಿ.ಆರ್.ಚೋಪ್ರಾರ ‘ನಯಾ ದೌರ್’ ಚಿತ್ರ ಹೊರತು ಅವರ ತಂದೆ ಅಲ್ಲ ಎನ್ನಲಾಗುತ್ತಿದೆ. ಆ ಚಿತ್ರಕ್ಕೆ ಗ್ವಾಲಿಯರ್ನ ಬೆಟ್ಟ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿತ್ತು.ಅದು ಡಕಾಯಿತರು ಸುಳಿದಾಡುತ್ತಿದ್ದ ಪ್ರದೇಶವಾದ್ದರಿಂದ ತಾಣವನ್ನು ಬದಲಾಯಿಸುವಂತೆ ಮಧುಬಾಲಾರ ತಂದೆ ಕೇಳಿಕೊಂಡರು. ಆದರೆ ಬೆಟ್ಟ ಪ್ರದೇಶವೇ ಬೇಕಾಗಿದ್ದ ಕಾರಣ ನಿರ್ಮಾಪಕರು ಅದಕ್ಕೆ ನಿರಾಕರಿಸಿದರು.ದಿಲೀಪ್ ಕುಮಾರ್ ಜತೆ ಮಧುಬಾಲಾಗೆ ಉತ್ತಮ ಸಂಬಂಧವಿದ್ದ ಕಾರಣ ನಿರ್ಮಾಪಕರು ಮಧುಬಾಲಾರನ್ನು ಒಲಿಸುವ ಕಾರ್ಯವನ್ನು ದಿಲೀಪ್ ಕುಮಾರ್ ಗೆ ವಹಿಸಿಕೊಟ್ಟರು.ಆದರೆ ಆಕೆ ತಂದೆಯ ಆಜ್ಞೆಯನ್ನು ತಿರಸ್ಕರಿಸಲು ಒಪ್ಪಲಿಲ್ಲ. ಚಿತ್ರದಿಂದ ಹೊರಬರಲು ಆಕೆ ತೀರ್ಮಾನಿಸಿದಾಗ ನಿರ್ಮಾಪಕರು ಆಕೆಯ ವಿರುದ್ಧ ದೂರು ದಾಖಲಿಸಿದರು. ಇದರಿಂದಾಗಿ ದಿಲೀಪ್ ಕುಮಾರ್ ಈಕೆಯ ಮೇಲೆ ಕೋಪಗೊಂಡಿದ್ದರು ಎನ್ನಲಾಗುತ್ತಿದ್ದರೂ ಅದು ಸತ್ಯವಲ್ಲ ಎನ್ನುವುದಾಗಿ ಬಾಲಿವುಡ್ ಮೂಲಗಳು ಹೇಳುತ್ತಿದ್ದವು. ಆದರೂ ಇವರಿಬ್ಬರ ಪ್ರೇಮ ಸುಖಾಂತ್ಯವಾಗಲಿಲ್ಲ.

ಮಧುಬಾಲಾ ಅಸೌಖ್ಯಗೊಂಡ ಬಳಿಕ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಲು ಯೋಜನೆ ಹಾಕಿಕೊಂಡಿದ್ದರು.ಈ ಮಧ್ಯೆ ಕಿಶೋರ್ ಕುಮಾರ್ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು. ಮೊದಲು ಲಂಡನ್ ಗೆ ಹೋಗಿ ಅಲ್ಲಿಯ ವೈದ್ಯರಿಂದ ಕ್ಲೀನ್ ಚಿಟ್ ಪಡೆದ ಬಳಿಕ ವಿವಾಹವಾಗು ಎಂಬುದಾಗಿ ತಂದೆ ಮಧುಬಾಲಾರಿಗೆ ಹೇಳಿದರೂ ಆಕೆ ಕೇಳದೆ ದಿಲೀಪ್ ಕುಮಾರ್ ರ ಮೇಲಿನ ಕೋಪದ ಭರದಲ್ಲಿ 1960ರಲ್ಲಿ ತನ್ನ 27ರ ಹರೆಯದಲ್ಲಿ ಗಾಯಕ ಕಿಶೋರ್ ಕುಮಾರ್ ರನ್ನು ವಿವಾಹವಾದರು.
ಆಕೆ ಹೆಚ್ಚು ಸಮಯ ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ಕಿಶೋರ್ ಕುಮಾರ್ ಆಕೆಯನ್ನು ಕರೆ ತಂದು ಮುಂಬಯಿಯ ಕಾರ್ಟರ್ ರೋಡ್ ನಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟುಬಿಟ್ಟರು. ಜೊತೆಗೆ ನರ್ಸ್ ಮತ್ತು ಡ್ರೈವರ್ ಗಳನ್ನೂ ನೀಡಿದ್ದರು ಎನ್ನಲಾಗುತ್ತಿದೆ. ಕಿಶೋರ್ ಕುಮಾರ್ ನಾಲ್ಕು ತಿಂಗಳಿಗೊಮ್ಮೆ ಹೋಗಿ ಅವರನ್ನು ಭೇಟಿಯಾಗುತ್ತಿದ್ದರು. ಆರೋಗ್ಯವಂತಳಾಗಿದ್ದ ಸಮಯ ಚಿತ್ರರಂಗದ ಹಾಟ್ ಪ್ರಾಪರ್ಟಿ ಆಗಿದ್ದ ತಾನು ಅನಾರೋಗ್ಯಗೊಂಡು ಹಾಸಿಗೆ ಹಿಡಿದ ಬಳಿಕ ಯಾರೊಬ್ಬರೂ ತನ್ನ ಆರೋಗ್ಯ ವಿಚಾರಿಸಲು ಬಾರದಿದ್ದುದರಿಂದ ಬಹಳವಾಗಿ ನೊಂದಿದ್ದರು ಆಕೆ. ಕೊನೆಗೆ ತನ್ನ 36ರ ಹರೆಯದಲ್ಲಿ ಇಹಲೋಕ ತ್ಯಜಿಸಿದರು.
ಏಳಿಂಜೆ ನಾಗೇಶ್,ಮುಂಬಯಿ-98929 80750







































































