ಬೆಂಗಳೂರು, ಆ. 28: ತುಳುನಾಡಿನ ಧಾರ್ಮಿಕ ವಿಧಿಗಳಾದ ದೈವಾರಾಧನೆ, ನೇಮ, ಕೋಲ, ನಾಗಾರಾಧನೆ, ಮಾರಿ ಪೂಜೆ, ಇತ್ಯಾದಿಗಳಿಗೆ ಅನುಮತಿ ಕೊಡಬೇಕೆಂದು ವಿನಂತಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಗಿದೆ.
ಕೊರೊನಾ ಪ್ರಸರಣವನ್ನು ತಡೆಯುವ ಸಲುವಾಗಿ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ ಎಲ್ಲರಂತೆ ತುಳುನಾಡಿನ ಧಾರ್ಮಿಕ ವಿಧಿಗಳನ್ನು ನೆರವೇರಿಸುವವರಿಗೂ ಬಹಳ ಕಷ್ಟ ಎದುರಾಗಿದೆ. ಆರ್ಥಿಕವಾಗಿ ಅವರು ಕಂಗಾಲಾಗಿದ್ದಾರೆ.
ತುಳುನಾಡಿನ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಅಚರಣೆಗಳಾಗಿರುವ ನಾಗಸ್ವರ ವಾದಕರು, ಮಡಿವಾಳರು, ದರ್ಶನ ಪಾತ್ರಿಗಳು, ಮಧ್ಯಸ್ಥರು, ಗರಡಿ ಪರಿಚಾರಕರು, ನಲಿಕೆಯವರು, ಪಂಬದರು ಸೇರಿ ಸುಮಾರು 600 ಮಂದಿ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ನಾಗಾರಾಧನೆ ಈ ಮುಂತಾದ ಧಾರ್ಮಿಕ ವಿಧಿಗಳನ್ನು 100 ಮಂದಿಗೆ ಮೀರದಂತೆ ಒಟ್ಟು ಸೇರಿ ನಡೆಸಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಯವರನ್ನು ವಿನಂತಿಸಲಾಗಿದೆ. ಅಂತೆಯೇ ಎಲ್ಲ ದೈವ ಪರಿಚಾರಕರಿಗೆ ಕೊರೊನಾ ಸಂಕಷ್ಟ ಸ್ಥಿತಿಯನ್ನು ಮನಗಂಡು ತಲಾ 10,000 ರೂ. ಪರಿಹಾರ ಮಂಜೂರು ಬೇಕೆಂದು ವಿನಂತಿಸಲಾಗಿದೆ.






































































