ರಾಜ್ಯ ಸರ್ಕಾರ ಈ ಶೈಕ್ಷಣಿಕ ಅವಧಿಯಲ್ಲಿ ಉನ್ನತ ಶಿಕ್ಷಣದ ರೆಗ್ಯುಲರ್ ತರಗತಿಗಳನ್ನು ಆರಂಭಿಸುವ ಕುರಿತಷ್ಟೇ ಮಾಹಿತಿ ನೀಡಿದೆ. ಆದರೆ, ಶಾಲೆಗಳು ಎಂದು ಪ್ರಾರಂಭವಾಗಲಿವೆ? ಸರ್ಕಾರಿ ಶಾಲಾ ಮಕ್ಕಳಿಗೂ ಆನ್ಲೈನ್ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ಏನು? ಈ ಕುರಿತ ನಿರ್ಧಾರ ಎಂದು ಪ್ರಕಟವಾಗುವುದು? ಹೀಗೆ ಯಾವೊಂದು ಪ್ರಶ್ನೆಗೆ ಸದ್ಯಕ್ಕಂತು ಉತ್ತರ ನೀಡಿಲ್ಲ.
ಬೆಂಗಳೂರು: ಕೊರೊನಾ ಭೀತಿಯಿಂದಾಗಿ ಈ ವರ್ಷ ಶಾಲಾ–ಕಾಲೇಜುಗಳ ಶೈಕ್ಷಣಿಕ ತರಗತಿಗಳು ಆರಂಭವಾಗುವುದು ಅನುಮಾನ ಎನ್ನಲಾಗಿತ್ತು. ಆದರೆ, ಅಕ್ಟೋಬರ್ 1 ರಿಂದ ಕಾಲೇಜುಗಳು ತೆರೆಯಲಿವೆ, ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಕೊರೊನಾ ಶುರುವಾದ ನಂತರ ಆನ್ಲೈನ್ ತರಗತಿಗಳ ಕುರಿತು ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಕೆಲವರು ಆನ್ಲೈನ್ ತರಗತಿಗಳು ಬೇಕು ಎಂದರೆ, ಕೆಲವರು ಆನ್ಲೈನ್ ತರಗತಿಯನ್ನು ವಿರೋಧಿಸುತ್ತಿದ್ದಾರೆ. ಅಲ್ಲದೆ, ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಏರುತ್ತಿದ್ದು, ಈ ವರ್ಷ ರೆಗ್ಯುಲರ್ ತರಗತಿಗಳು ನಡೆಯುವುದೇ ಅನುಮಾನ ಎನ್ನಲಾಗಿತ್ತು. ಆದರೆ, ಈ ಎಲ್ಲಾ ಅನುಮಾನಗಳಿಗೆ ರಾಜ್ಯ ಸರ್ಕಾರ ಇಂದು ತೆರೆ ಎಳೆದಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, “ಕಾಲೇಜು ಮತ್ತು ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೆಪ್ಟೆಂಬರ್ ಮೊದಲ ತಿಂಗಳಿನಿಂದ ಆನ್ಲೈನ್ ತರಗತಿಗಳು ನಡೆಯಲಿವೆ. ಆದರೆ, ಅಕ್ಟೋಬರ್ 01 ರಿಂದ ಈ ವರ್ಷದ ಶೈಕ್ಷಣಿಕ ತರಗತಿಗಳು ಎಂದಿನಂತೆ ನಡೆಯಲಿವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, “ಪ್ರತಿ ವಿಶ್ವವಿದ್ಯಾಲಯದಲ್ಲೂ ಹೆಲ್ಪ್ಲೈನ್ ಪ್ರಾರಂಭ ಮಾಡಲಾಗುವುದು, ಈ ಹೆಲ್ಪ್ಲೈನ್ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಇದರ ಮೂಲಕ ಅಗತ್ಯ ಮಾಹಿತಿಯನ್ನೂ ಸಂಗ್ರಹಿಸಲಾಗುವುದು” ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಶೈಕ್ಷಣಿಕ ಅವಧಿಯಲ್ಲಿ ಉನ್ನತ ಶಿಕ್ಷಣದ ರೆಗ್ಯುಲರ್ ತರಗತಿಗಳನ್ನು ಆರಂಭಿಸುವ ಕುರಿತಷ್ಟೇ ಮಾಹಿತಿ ನೀಡಿದೆ. ಆದರೆ, ಶಾಲೆಗಳು ಎಂದು ಪ್ರಾರಂಭವಾಗಲಿವೆ? ಸರ್ಕಾರಿ ಶಾಲಾ ಮಕ್ಕಳಿಗೂ ಆನ್ಲೈನ್ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ಏನು? ಈ ಕುರಿತ ನಿರ್ಧಾರ ಎಂದು ಪ್ರಕಟವಾಗುವುದು? ಹೀಗೆ ಯಾವೊಂದು ಪ್ರಶ್ನೆಗೆ ಸದ್ಯಕ್ಕಂತು ಉತ್ತರ ನೀಡಿಲ್ಲ.