ಗೋಪಾಲಕೃಷ್ಣ ಪ್ರಭು ನಿಧನ‌

ಕಾರ್ಕಳ : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕ, ಬಿಜೆಪಿ ಕಾರ್ಯಕರ್ತ, ಕುಕ್ಕುಂದೂರು ಜಯಂತಿನಗರ ಎರಡನೇ ವಾರ್ಡಿನ ಬೂತ್‌ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಅವರು ಜೂ. 15ರಂದು ರಾತ್ರಿ ಅಸೌಖ್ಯದಿಂದ ನಿಧನರಾದರು. ಶ್ರೀ ಮಂಜುನಾಥ ಪೈ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾಗಿ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಅವರು ಬಾಲ್ಯದಿಂದಲೂ ಕಾಲಿಗೆ ಚಪ್ಪಲಿ ಧರಿಸದೇ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಶಾಸಕ ಸುನಿಲ್‌ ಕುಮಾರ್‌ ಸಂತಾಪ
ನಿಸ್ವಾರ್ಥ ಸೇವೆ, ಸರಳ ವ್ಯಕ್ತಿತ್ವ ಮತ್ತು ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮೇಲಿನ ಅಪಾರ ನಿಷ್ಠೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅತ್ಯಂತ ಸೌಮ್ಯ ಸ್ವಭಾವದ, ದೇವದುರ್ಲಭ ಹಿರಿಯ ಕಾರ್ಯಕರ್ತರಾದ ಗೋಪಾಲ ಕೃಷ್ಣ ಪ್ರಭು ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ.

ಪರಿಸರದ ಮೇಲಿನ ಅಪಾರ ಕಾಳಜಿ, ಸ್ವಚ್ಛತೆಯ ಬಗ್ಗೆ ಅಚಲ ಬದ್ಧತೆ ಹಾಗೂ ಸಮಾಜಮುಖಿ ಚಿಂತನೆಗಳಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಅವರು ಸ್ವಚ್ಛತೆಗೆ ನೀಡಿದ ಆದ್ಯತೆ ಇಂದಿನ ಪೀಳಿಗೆಯ ಕಾರ್ಯಕರ್ತರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೂ ಮಾದರಿಯಾಗಿತ್ತು. ತಮ್ಮ ನಿಸ್ವಾರ್ಥ ಸೇವೆ, ಸರಳ ವ್ಯಕ್ತಿತ್ವ ಮತ್ತು ಸಮಾಜದ ಅಭಿವೃದ್ಧಿಯ ಕುರಿತ ಬದ್ಧತೆಯ ಮೂಲಕ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು. ಶ್ರೀರಾಮನ ಅಪಾರ ಭಕ್ತರಾಗಿದ್ದ ಅವರು, ಕಾರ್ಕಳದ ರಾಮ ಮಂದಿರದಲ್ಲಿ ಶ್ರೀರಾಮನ ನಿಸ್ವಾರ್ಥ ಸೇವಕರಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದರು. ಧಾರ್ಮಿಕ, ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಅವರ ಸೇವೆ ಎಲ್ಲರಿಗೂ ಆದರ್ಶಪ್ರಾಯವಾಗಿತ್ತು. ಇಂತಹ ಆದರ್ಶಮಯ ಹಿರಿಯ ಜೀವವನ್ನು ಕಳೆದುಕೊಂಡಿರುವುದು ಪಕ್ಷಕ್ಕೆ, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಗಳು ಸದಾ ನಮ್ಮೊಂದಿಗೆ ಜೀವಂತವಾಗಿರಲಿವೆ. ಪರಮಾತ್ಮನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ವಿ. ಸುನಿಲ್‌ ಕುಮಾರ್ ಸಂತಾಪ ಸೂಚಿಸಿದ್ದಾರೆ.























error: Content is protected !!
Scroll to Top