ಕಾರ್ಕಳ ಶಾಸಕರಿಗೆ ಎಷ್ಟು ನಾಲಿಗೆ ?

ಕಾರ್ಕಳ‌ : ಮೊನ್ನೆ ಮೊನ್ನೆ ಸಿದ್ದರಾಮಯ್ಯನವರ ರಾಜೀನಾಮೆ ‌ಕೇಳುತ್ತಿದ್ದ ಕಾರ್ಕಳ ಶಾಸಕರು ಇದೀಗ ಗೋಸುಂಬೆಯಂತೆ ಬಣ್ಣ ಬದಲಾಯಿಸಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗೆ ಎಷ್ಟು ನಾಲಿಗೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಶ್ನಿಸಿದ್ದಾರೆ.

ಯಾಕೆ ಮೌನವಾಗಿದ್ದರು ?
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಿಕರ್ತರಾದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕಣ್ಣೀರು ಸುರಿಸಿದರೂ ಬಿಜೆಪಿ ದೆಹಲಿ ನಾಯಕರು ರಾಜೀನಾಮೆ ಕೊಡಿಸಿದಾಗ, ಸುನಿಲ್ ಕುಮಾರ್ ಯಾಕೆ ಮೌನವಾಗಿದ್ದರು ? ತಮ್ಮದೇ ಪಕ್ಷದ ನಾಯಕನ ಪದಚ್ಯುತಿ ಬಗ್ಗೆ ಮಾತನಾಡದವರು ಈಗ ಹೇಳಿಕೆ ನೀಡುತ್ತಿರುವುದು ಅವರ ರಾಜಕೀಯ ದಿವಾಳಿತನಕ್ಕೆ ಉದಾಹರಣೆಯಾಗಿದೆ ಎಂದು ಶುಭದ ರಾವ್‌ ಹೇಳಿದ್ದಾರೆ.

ಯಡಿಯೂರಪ್ಪನವರಿಗೆ ಅವಮಾನವಾಗುವುದು ಒಪ್ಪಿಗೆಯೇ ?
ಸಿದ್ದರಾಮಯ್ಯನವರಿಗೆ ಸೆಗಣಿ ತಿನ್ನಿ, ಸಿದ್ದರಾಮುಲ್ಲಾ ಖಾನ್, ಹಿಂದೂ ವಿರೋಧಿ, ದೇಶ ದ್ರೋಹಿ ಎಂದು ಬಿಜೆಪಿ ನಾಯಕರು ಅವಮಾನ ಮಾಡಿದಾಗ ಸುನಿಲ್ ಕುಮಾರ್ ಬಾಯಲ್ಲಿ ಏನು ಇಟ್ಟುಕೊಂಡಿದ್ದರು ? ಸಿದ್ದರಾಮಯ್ಯನವರನ್ನು ಘೋರಿ ಘಜನಿ ಎಂದು ಬಿಜೆಪಿ ಐಟಿ ಸೆಲ್ ಚಿತ್ರಿಸಿದಾಗ ಸುನಿಲ್ ಕುಮಾರ್ ಎಲ್ಲಿದ್ದರು ? ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಷ್ಟು ದಿನ ಹೀನಾಮಾನವಾಗಿ ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಗೈದು ಇಂದು ಕಾಂಗ್ರೆಸ್ ಪಕ್ಷದ ಒಳಗೆ ಹುಳಿ ಹಿಂಡುವಾಗೆ ಕೀಳು ಕೃತ್ಯ ನಡೆಸುವ ಸುನಿಲ್ ಕುಮಾರ್ ಎಂತಹ ಕೆಟ್ಟ ಮನಸ್ಥಿತಿಯವರು ಎಂದು ತಿಳಿಯುತ್ತದೆ ಎಂದ ಶುಭದ ರಾವ್‌ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಯಡಿಯೂರಪ್ಪನವರನ್ನು ಬಿಜೆಪಿ ಉಚ್ಚಾಟಿತ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ದಿನನಿತ್ಯ ಅವಹೇಳನ ಮಾಡುತ್ತಿದ್ದರೂ ಸುನಿಲ್ ಕುಮಾರ್ ಯಾಕೆ ವಿರೋಧಿಸುತ್ತಿಲ್ಲ ? ಕಾಂಗ್ರೆಸ್ ನಾಯಕರ ಬಗ್ಗೆ ಪ್ರತಿಕ್ರಿಯೆ ನೀಡುವ ಸುನಿಲ್ ಕುಮಾರ್‌ಗೆ ಯಡಿಯೂರಪ್ಪನವರಿಗೆ ಅವಮಾನವಾಗುವುದು ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ರಾಜಕೀಯಕ್ಕೆ ಪ್ರತಿಕ್ರಿಯೆ ಕೊಡುತ್ತ ಸಮಯ ವ್ಯರ್ಥ ಮಾಡುವ ಬದಲು ಕಾರ್ಕಳದ ಅಭಿವೃದ್ಧಿಯ ಕಡೆಗೆ ಸುನಿಲ್ ಕುಮಾರ್ ಗಮನ ನೀಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.















































































error: Content is protected !!
Scroll to Top