ಮಂಗಳೂರು : ಕರಾವಳಿಯಲ್ಲಿ ದ್ವೇಷಭರಿತ ಭಾಷಣ, ಪ್ರಚೋದನಾತ್ಮಕ ಹೇಳಿಕೆ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಮಾಜಘಾತುಕ ವದಂತಿಗಳು ಹರಡಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಹಿಂದಿನ ಪೊಲೀಸ್ ಅಧಿಕಾರಿಗಳ ಬಗ್ಗೆ ತನಿಖೆ ನಡೆಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಹಿಂದಿನ ಕೆಲ ಪೊಲೀಸ್ ಆಧಿಕಾರಿಗಳು ದ್ವೇಷ ಭಾಷಣ, ಪ್ರಚೋದನಕಾರಿ, ಹೇಳಿಕೆಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಸಮಾಜ ಘಾತುಕ ವದಂತಿಗಳ ವಿರುದ್ಧ ಸೂಕ್ತ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಿಂದಿನ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ ಕರಾವಳಿ ಭಾಗದಲ್ಲಿ ಧರ್ಮಾಧಾರಿತ ಕೊಲೆ ಮತ್ತು ಹಿಂಸಾಚಾರ ತಪ್ಪಿಸಬಹುದಿತ್ತು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಹಿಂದೆ ದರೋಡೆ, ಮಾದಕ ವಸ್ತು ಸಾಗಾಟ ಮತ್ತು ಇತರ ಸಮಾಜಘಾತುಕ ಕೆಲಸಗಳಲ್ಲಿ ನಿಷ್ಠ ಹಾಗೂ ತ್ವರಿತಗತಿಯಲ್ಲಿ ಸೂಕ ಕ್ರಮ ಕೈಗೊಂಡಿದ್ದ ದ.ಕ. ಜಿಲ್ಲೆಯ ಹಿಂದಿನ ಪೊಲೀಸ್ ಅಧಿಕಾರಿಗಳು ದ್ವೇಷ ಭಾಷಣಗಳ ವಿರುದ್ಧ ಯಾಕೆ ಸೂಕ್ತ ಕ್ರಮ ಕೈಗೊಂಡಿಲ್ಲ, ಅದಕ್ಕೆ ಕಾರಣವೇನೆಂಬುದು ಸೂಕ್ತ ತನಿಖೆಯಾಗಬೇಕು. ರಾಜ್ಯದ ಆಂತರಿಕ ಶಾಂತಿ, ಸಾಮರಸ್ಯ ಹಾಗೂ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಆಶಯದಿಂದ ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಆಗ್ರಹಿಸಿದ್ದಾರೆ.











