ಸುನಿಲ್ ಕುಮಾರ್ ನೇತೃತ್ವದಲ್ಲಿ ಉಡುಪಿ ಶಾಸಕರುಗಳ‌‌ ನಿಯೋಗ ಎಸ್ಪಿ ಭೇಟಿ

ಉಡುಪಿ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದ ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ಐದು ಮಂದಿ ಶಾಸಕರ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರನ್ನು ಸೋಮವಾರ ಭೇಟಿ ಮಾಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಮಾತುಕತೆ ನಡೆಸಿತು.

ಕಾನೂನಿಗೆ ಸಂಬಂಧಿಸಿ ಜಿಲ್ಲಾಡಳಿತ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿರುವ ಕೆಲವು ಕ್ರಮಗಳನ್ನು ಖಂಡಿಸಿದ ಶಾಸಕರು, ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಹಿಂದೂ ಮುಖಂಡರ ಮನೆಗಳಿಗೆ ತೆರಳಿ ಅವರನ್ನು ಬಂಧಿಸುತ್ತಿರುವ ಪೊಲೀಸರ ಕ್ರಮವು ಸರಿಯಲ್ಲ. ಹಿಂದೂ ಮುಖಂಡರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ರೀತಿಯ ದಾಳಿ ಮತ್ತು ಬಂಧನಗಳು ಏಕಪಕ್ಷೀಯವಾಗಿ ಪರಿಣಮಿಸುತ್ತಿದ್ದು, ಸಮಾಜದಲ್ಲಿ ಪ್ರಚೋದನೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಸ್ಪಿಯವರ ಗಮನಕ್ಕೆ ತಂದರು.

ಹಿಂದೂಗಳನ್ನೆ ಗುರಿಯಾಗಿಸುವ ಕ್ರಮವು ನ್ಯಾಯಾತೀತವಾಗಿದ್ದು, ಒತ್ತಾಯದೊಂದಿಗೆ ಇಂತಹ ಕಾನೂನು ಬಾಹಿರ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದರು. ಇದೆ ವೇಳೆ, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಟ್ಕಾ, ಜುಗಾರಿ, ಮತ್ತು ಇತರ ಅಕ್ರಮ ಚಟುವಟಿಕೆಗಳತ್ತ ಕೂಡ ಗಮನ ಸೆಳೆದ ನಿಯೋಗ ಜಿಲ್ಲೆಯಲ್ಲಿ ಮಟ್ಕಾ ದಂಧೆ, ಜುಗಾರಿ ಇನ್ನಿತರ ಗಂಭಿರ ಕಾನೂನು ಬಾಹಿರ ಚಟುವಟಿಕೆ ಮಿತಿಮೀರಿ ನಡೆಯುತಿದ್ದು ಅವರ ವಿರುದ್ಧ ಅಗತ್ಯ ಕ್ರಮ ಜರಗಿಸುವಂತೆ ಆಗ್ರಹಿಸಿದರು.

ಜಿಲ್ಲೆಯಲ್ಲಿ ಶಾಂತಿ, ಸಮಾಧಾನ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡುವುದು ಬಹುಮುಖ್ಯವಾದ ವಿಷಯವಾಗಿದ್ದು, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧದ ಕ್ರಮಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಶಾಸಕರ ನಿಯೋಗ ಎಸ್ ಪಿ ಅವರಿಗೆ ನೀಡಿದೆ.

ಪೊಲೀಸರು ಪಕ್ಷಪಾತಿ ನಡೆ ತಾಳಿದರೆ, ಸಾರ್ವಜನಿಕರ ನಂಬಿಕೆಗೆ ಧಕ್ಕೆಯಾಗುತ್ತದೆ. ಎಲ್ಲಾ ಸಮುದಾಯಗಳಿಗೂ ಸಮಾನ ನ್ಯಾಯ ಒದಗಿಸುವ ಪ್ರಾಮಾಣಿಕತೆ ಅಗತ್ಯದಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿದ ಅವರು ಇದೇ ರೀತಿ ಒಂದು ಸಮುದಾಯವನ್ನೆ ಗುರಿಯಾಗಿಸಿ ಕ್ರಮಗಳು ಮುಂದುವರೆದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದಿತು ಎನ್ನುವ ಎಚ್ಚರಿಕೆಯನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕರ ತಂಡ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿ ವಿವಿಧ ವಿಚಾರಗಳ ಬಗ್ಗೆ ವರಿಷ್ಠಾಧಿಕಾರಿಯವರ ಜೊತೆ ಮಾತು ಕತೆ ನಡೆಸಿ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು.































































































error: Content is protected !!
Scroll to Top