ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕು : ಬಿಜೆಪಿ ಆಗ್ರಹ
ಬೆಂಗಳೂರು : ವಕ್ಫ್ ನೋಟಿಸ್ಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ರಾಜ್ಯದಾದ್ಯಂತ ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆಯಡಿ ಪ್ರತಿಭಟನೆ ಆರಂಭಿಸಿದೆ. ಕೋಲಾರದಿಂದ ಮಂಗಳೂರಿನವರೆಗೆ, ಬೆಂಗಳೂರಿನಿಂದ ವಿಜಯಪುರದವರೆಗೆ ವಕ್ಫ್ ವಿವಾದ ವಿರೋಧಿಸಿ ಪ್ರತಿಭಟನೆಗಳಿದು ತಕ್ಷಣ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕೆಂದು ಆಗ್ರಹಿಸಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಜೆಪಿ ನಾಯಕರು, ರೈತ ವಿರೋಧಿ ಸಚಿವ ಜಮೀರ್ ಅಹಮ್ಮದ್ ಖಾನ್ ವಜಾಗೊಳಿಸಿ, ಅಲ್ಪಸಂಖ್ಯಾತರ ಓಲೈಕೆಗಾಗಿ ರೈತರ ಬದುಕಿಗೆ ಕೊಳ್ಳೆ ಇಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ, ಮಠ, ಮಂದಿರ, ಅನ್ನದಾತರ ಜಾಗಕ್ಕೂ ಬೇಲಿ ಹಾಕಿದ ವಕ್ಫ್ ಗೆ ಧಿಕ್ಕಾರ ಎನ್ನುವ ಬಿತ್ತಿ ಫಲಕಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಡಿಸಿ ಕಚೇರಿ ಎದುರಿನ ರಸ್ತೆಯಲ್ಲಿ ಧರಣಿ ಹಮ್ಮಿಕೊಂಡರು.

ಕಲಬುರಗಿ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ನಮ್ಮದು ಎರಡು ಬೇಡಿಕೆಗಳಿವೆ. ಒಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಮತ್ತು ಇನ್ನೊಂದು ಬೇಡಿಕೆ ವಕ್ಫ್ ಆಸ್ತಿಗೆ ಸಂಬಂಧಿಸಿದ 1974 ರ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಬಿಜೆಪಿ ಒತ್ತಾಯಿಸಿದೆ.



























