ಕಾರ್ಕಳ : ಇನ್ನೋವಾ ಕಾರೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 6 ಮಂದಿ ಗಾಯಗೊಂಡಿರುವ ಘಟನೆ ಅ. 20ರಂದು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಹುಬ್ಬಳ್ಳಿ ಮೂಲದವರಾದ ಮಂಜುನಾಥ್ ಗೌಡ (28), ಆತ್ಮಾನಂದ (24), ಹನುಮಂತ್ ಗೌಡ (23), ಹಾಲಪ್ಪ ಗೌಡ (24), ವೀರಭದ್ರಗೌಡ (28) ಹಾಗೂ ಬಸನಗೌಡ (27) ಗಾಯಗೊಂಡವರು. ಇವರು ಹೆಬ್ರಿ ಕಡೆಯಿಂದ ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದು ಮುಂಜಾನೆ 5.30ರ ವೇಳೆಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಜೆಕಾರು ಸಮೀಪದ ಓಟೆಹಳ್ಳ ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನೊಳಗಿದ್ದ 6 ಮಂದಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಏರ್ ಬ್ಯಾಗ್ಗಳು ತೆರೆದುಕೊಂಡ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಕಾರಿನಲ್ಲಿ GOVT OF INDIA ಎಂಬ ನಾಮಫಲಕವಿದ್ದು, ಖಾಸಗಿ ವಾಹನದಲ್ಲಿ ಈ ರೀತಿಯ ಬೋರ್ಡ್ ಭಾರತ ಸರಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕಾಗಿದೆ.
ಅಜೆಕಾರು : ಸೇತುವೆ ತಡೆಗೋಡೆಗೆ ಗುದ್ದಿದ ಕಾರು – 6 ಮಂದಿಗೆ ಗಾಯ


































