ಅಪಾಯಕಾರಿ ಕೂಟದಿಂದ ಹಿಂದೂಗಳಿಗೆ ತೊಂದರೆ ನಿಶ್ವಿತ – ಸುನಿಲ್ ಕುಮಾರ್
ಕಾರ್ಕಳ : ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಂದರ್ಭದಲ್ಲಿ ಎಸ್ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಇದರಿಂದ ಎಸ್ಡಿಪಿಐ ಜೊತೆಗೆ ನಮಗೆ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಕಾಂಗ್ರೆಸ ನ ನಿಜ ಬಣ್ಣ ಬಯಲಾಗಿದೆ. ಎಸ್ಡಿಪಿಐ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ತಾಳುತ್ತಿದೆ. ತನ್ನ ಅನುಕೂಲತೆಗೆ ತಕ್ಕಂತೆ ಈ ಸಂಬಂಧವನ್ನು ನೈತಿಕ ಹಾಗೂ ಅನೈತಿಕವಾಗಿಟ್ಟುಕೊಳ್ಳುವುದು ಕಾಂಗ್ರೆಸ್ ಗೆ ಛಾಳಿಯಾಗಿದೆ. ಈ ಕಾರಣಕ್ಕಾಗಿಯೇ ಎಸ್ಡಿಪಿಐ ಕಾಂಗ್ರೆಸ್ ನ ಬಿ ಟೀಂ ಎಂಬುದು ನಮ್ಮ ವಾದ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅಪಾಯಕಾರಿ ಕೂಟ
ರಾಜ್ಯಪಾಲರ ನಿವಾಸಕ್ಕೆ ಬಾಂಗ್ಲಾ ಮಾದರಿಯಲ್ಲಿ ನುಗ್ಗುತ್ತೇವೆ ಎಂದ ಕಾಂಗ್ರೆಸ್ ಎಂಎಲ್ಸಿ ಐವಾನ್ ಡಿಸೋಜಾ ಅವರ ಹೇಳಿಕೆ ಎಸ್ಡಿಪಿಐ ಜತೆ ಕಾಂಗ್ರೆಸ್ ಪುನರ್ವಿವಾಹದ ಸೂಚನೆ ಎನ್ನಬಹುದಾಗಿದೆ. ಈ ಹೊಂದಾಣಿಕೆ ದಕ್ಷಿಣ ಕನ್ನಡ ಹಾಗೂ ಬೇರೆ ಜಿಲ್ಲೆಗಳಿಗೆ ಅಪಾಯದ ಮುನ್ಸೂಚನೆಯಾಗಿದೆ. ಈ ಎರಡು ಪಕ್ಷಕ್ಕೆ ನಿಷೇಧಿತ ಪಿಎಫ್ಐ ಜತೆಗೆ ಅಂತರ್ ಸಂಬಂಧ ಇತ್ತೆಂಬುದು ಜಗಜ್ಜಾಹೀರು. ಮುಂಬರುವ ದಿನಗಳಲ್ಲಿ ಈ ಅಪಾಯಕಾರಿ ಕೂಟ ಹಿಂದು ಕಾರ್ಯಕರ್ತರು ಹಾಗೂ ಸಂಘಟನೆಗಳಿಗೆ ತೊಂದರೆ ನೀಡುವುದು ನಿಶ್ಚಿತವಾಗಿದ್ದು ಸಮಾಜದ ನೆಮ್ಮದಿಗೆ ಕಂಟಕಕಾರಿಯಾಗಿ ಪರಿಣಮಿಸಲಿದೆ. ಇವರಿಬ್ಬರ ಹಿಡನ್ ಅಜೆಂಡಾ ಸಾರ್ವಜನಿಕವಾಗಿ ಬಯಲುಗೊಳಿಸಬೇಕಿದೆ ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






