ಮತ್ತೆ ಕೂಂಬಿಂಗ್ ಕಾರ್ಯಾಚರಣೆ ಚುರುಕು
ಮಂಗಳೂರು : ಕರಾವಳಿಯಲ್ಲಿ ನಕ್ಸಲರು ಓಡಾಡುತ್ತಿರುವ ಅನುಮಾನವನ್ನು ಪುಷ್ಟೀಕರಿಸುವ ಇನ್ನೊಂದು ಘಟನೆ ಕಡಬದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಗುರುವಾರ ರಾತ್ರಿ ಶಂಕಿತ ನಕ್ಸಲರ ತಂಡ ಆಗಮಿಸಿ ಊಟ ಮಾಡಿ ದಿನಸಿ ಸಾಮಗ್ರಿ ಪಡೆದು ತೆರಳಿರುವ ವಿಚಾರ ಬೆಳಕಿಗೆ ಬಂದಿದೆ.
ಈ ತಂಡದಲ್ಲಿ 6 ಮಂದಿ ಇದ್ದು ಮನೆಗೆ ಬಂದ ನಕ್ಸಲರು ಶಸ್ತ್ರಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯಕ್ಕೆ ತೆರಳಿದ್ದಾರೆ. 2012ರಲ್ಲಿ ಈ ಪ್ರದೇಶದ ಹತ್ತಿರದಲ್ಲೇ ನಕ್ಸಲರ ಮೇಲೆ ಶೂಟೌಟ್ ನಡೆದಿತ್ತು. ಮಾ. 16ರಂದು ನಕ್ಸಲರು ಕೂಜಿಮಲೆ, ಮಾ. 23ರಂದು ಕಡಬದ ಐನೆಕಿದು ಗ್ರಾಮಕ್ಕೆ ಬಂದು ಹೋಗಿದ್ದರು.
ಗುರುವಾರ ಸಂಜೆ 7 ಗಂಟೆಗೆ ವೇಳೆ ಮನೆಗೆ ಬಂದ ಈ ತಂಡ ಸುಮಾರು ಒಂಬತ್ತು ಗಂಟೆ ವೇಳೆಗೆ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ತಿಳಿದುಬಂದಿದೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದರು, ಮನೆಗೆ ಆಗಮಿಸಿದ ಶಂಕಿತರು ಶಸ್ತ್ರಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ.
ಶಂಕಿತ ನಕ್ಸಲರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತದೆ ನಕ್ಸಲ್ ನಿಗ್ರಹ ಪಡೆ, ಪೊಲೀಸರು ಮನೆಗೆ ಭೇಟಿ ನೀಡಿ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ.





