ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭಗುಡಿಗೆ ಚಿನ್ನದ ಬಾಗಿಲು
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಿದ್ಧತೆ ಕಾರ್ಯ ಅಂತಿಮ ಹಂತದಲ್ಲಿದೆ. ರಾಮ ಮಂದಿರದ ಚಿನ್ನದ ಬಾಗಿಲು ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ.
ಅಯೋಧ್ಯೆ ರಾಮ ಮಂದಿರದ ನೆಲಮಹಡಿಯ ಒಟ್ಟು 14 ಬಾಗಿಲುಗಳನ್ನು ಅಳವಡಿಸಲಾಗಿದೆ. ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸುವ ಗರ್ಭಗುಡಿಗೆ ಚಿನ್ನದ ಬಾಗಿಲು ಅಳವಡಿಕೆ ಮಾಡುವ ಮೂಲಕ ನೆಲಮಹಡಿಯಲ್ಲಿ 14 ಬಾಗಿಲು ಅಳವಡಿಕೆ ಕಾರ್ಯ ಪೂರ್ಣಗೊಂಡಿವೆ.
ಕೆಲ ದಿನಗಳ ಹಿಂದೆಯಷ್ಟೇ ದೇವಾಲಯದ ಚಿನ್ನದ ಲೇಪಿತ ಬಾಗಿಲಿನ ಮೊದಲ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಚಿನ್ನದ ಲೇಪಿತ ಬಾಗಿಲುಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ದೇವರ ವಿಗ್ರಹವನ್ನು ಜನವರಿ 22ರಂದು ಪ್ರತಿಷ್ಠಾಪಿಸಲಾಗುವುದು. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಈ ಬಾಗಿಲನ್ನು ರೂಪಿಸಿದ್ದಾರೆ.
ಜನವರಿ 22ರಂದು ಅಯೋಧ್ಯೆಯಲ್ಲಿ ಲಕ್ಷಾಂತರ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೇಂದ್ರ ಬಿಂದುವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು, ಜಡ್ಜ್ಗಳು, ವಿಜ್ಞಾನಿಗಳು, ಆಟಗಾರರು, ಸಂಗೀತಗಾರರು, ಸಂತರು, ಪ್ರಾಣತ್ಯಾಗ ಮಾಡಿದ ಸೈನಿಕರ ಕುಟುಂಬಸ್ಥರು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.































