ಖಜಾನೆ ಅಧಿಕಾರಿಗಳಿಂದ ಶೇ.20 ಕಮಿಷನ್ಗೆ ಬೇಡಿಕೆ ಎಂದು ಆರೋಪ
ಬೆಂಗಳೂರು : ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಖರ್ಚುವೆಚ್ಚಕ್ಕೆ ಸರ್ಕಾರ ಕೊಡುವ ಮಾಡುವ ತಸ್ತಿಕ್ ಹಣ ಬಿಡುಗಡೆ ಮಾಡಲು ಖಜಾನೆ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರ ಸಂಘ ಆರೋಪಿಸಿದೆ.
ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದಿರುವ ಮುಜರಾಯಿ ಇಲಾಖೆಯ ಸಿ ದರ್ಜೆ ದೇವಸ್ಥಾನಗಳ ಅರ್ಚಕರ ಸಂಘ, ಸರ್ಕಾರ ಪ್ರತಿ ವರ್ಷ ದೇವಸ್ಥಾನಗಳಲ್ಲಿ ನಿತ್ಯ ಪೂಜಾ ಕಾರ್ಯ ಇತ್ಯಾದಿ ಸಣ್ಣಪುಟ್ಟ ಕೆಲಸಗಳಿಗೆ ತಸ್ತಿಕ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣ ಬಿಡುಗಡೆ ಮಾಡಲು ಖಜಾನೆ ಅಧಿಕಾರಿಗಳಿಗೆ ಶೇ.20ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಕಮಿಷನ್ ಕೊಡದೆ ಇದ್ದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಹಣ ಬಿಡುಗಡೆಗೂ ದಲ್ಲಾಳಿಗಳಿಗೆ ಹಣ ಕೊಡಬೇಕಾಗಿದೆ. ಆದ್ದರಿಂದ ಕಮಿಷನ್ ವ್ಯವಹಾರವನ್ನು ಸರ್ಕಾರ ತಡೆಯಬೇಕು ಎಂದು ಆಗ್ರಹಿಸಿದೆ.
ಕಮಿಷನ್ ವ್ಯವಹಾರ ನಡೆಯದಿರಲು ಸರ್ಕಾರ ಆಯಾ ದೇವಾಲಯಗಳ ಅರ್ಚಕರ ಖಾತೆಗೆ ತಸ್ತಿಕ್ ಹಣ ಜಮೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದೆ.
ಸಂಘದ ಮನವಿಗೆ ಸ್ಪಂದಿಸಿರುವ ಸಚಿವ ರಾಮಲಿಂಗಾರೆಡ್ಡಿ, ಅರ್ಚಕರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಈ ವರೆಗೆ ತಹಶೀಲ್ದಾರ್ ಕಚೇರಿಯಿಂದ ವೇತನ ಪಡೆಯಬೇಕಿತ್ತು. ಕಮಿಷನ್ ಕೇಳುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಅರ್ಚಕರ ಖಾತೆಗೆ ನೇರವಾಗಿ ತಸ್ತಿಕ್ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಹೇಳಿದ್ದಾರೆ.


































