3 ತಿಂಗಳಿಂದ ಅಕ್ಕಿ ಪಡೆಯದವರಿಗಿಲ್ಲ ಅನ್ನಭಾಗ್ಯದ ಹಣ

ಪ್ರತಿ ತಿಂಗಳು ಒಬ್ಬನಿಗೆ 170 ರೂ.ಯಂತೆ ವರ್ಗಾವಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆಗೆ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಕಳೆದ ಮೂರು ತಿಂಗಳಿನಿಂದ ಪಡಿತರ ಆಹಾರ ಧಾನ್ಯಗಳನ್ನು ಪಡೆದವರೆಲ್ಲರೂ ನಗದು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಪ್ರತಿ ವ್ಯಕ್ತಿಗೆ ಕೆಜಿಗೆ 34 ರೂ.ಯಂತೆ 5 ಕೆಜಿ ಅಕ್ಕಿ ಹಣ ಅಂದರೆ 170 ರೂ.ಯಂತೆ ನಗದು ಕಾರ್ಡಿನ ಯಜಮಾನರ ಹಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಲಿದೆ. ಮನೆಯಲ್ಲಿ ನಾಲ್ಕು ಸದಸ್ಯರಿದ್ದರೆ ಪ್ರತಿ ತಿಂಗಳು 680 ರೂ. ಸಿಗಲಿದೆ.
ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿಯನ್ನು ಸಿಗುವುದರಿಂದ ಅಂಥ ಕುಟುಂಬಗಳನ್ನು ಈ ಯೋಜನೆಯಿಂದ ಕೈಬಿಡಲಾಗಿದೆ. ಅಂತ್ಯೋದಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಜನರನ್ನು ಹೊಂದಿದ್ದರೆ ನಗದು ಪಡೆಯುತ್ತಾರೆ. ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ ಅವರಿಗೆ 170 ರೂ. ಸಿಗಲಿದ್ದು, ಕುಟುಂಬದಲ್ಲಿರುವ ಹೆಚ್ಚುವರಿ ಸದಸ್ಯರಿಗೂ ಇದೇ ಲೆಕ್ಕಾಚಾರ ಅನ್ವಯವಾಗಲಿದೆ. ಸರ್ಕಾರಿ ದಾಖಲೆಯ ಅಂಶಗಳ ಪ್ರಕಾರ 1,28,16,253 ಕಾರ್ಡ್‌ಗಳ ಪೈಕಿ 1,28,13,048 ಪಡಿತರ ಚೀಟಿಗಳಿಗೆ ಆಧಾರ್ ಸೀಡಿಂಗ್ ಮಾಡಲಾಗಿದೆ ಮತ್ತು 3016 ಕಾರ್ಡ್‌ಗಳು ಮಾತ್ರ ಬಾಕಿ ಉಳಿದಿವೆ. ಮುಂದಿನ ಎರಡು ತಿಂಗಳಲ್ಲಿ ಪಿಡಿಎಸ್ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಒದಗಿಸಲು ಬಯೋಮೆಟ್ರಿಕ್ ವಿವರಗಳ ಬದಲಿಗೆ ಮೊಬೈಲ್ ಒಟಿಪಿ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ತಿಂಗಳು ಅಕ್ಕಿ ಪಡೆದವರ ಖಾತೆಗೆ ಮಾತ್ರ ಹಣ ಹಾಕಲು ಸರ್ಕಾರ ತೀರ್ಮಾನಿಸಿದ್ದು, ಕಳೆದ ತಿಂಗಳು 1,28,23,868 ಪೈಕಿ 1,17,29,296 ಕುಟುಂಬಗಳು ಅಕ್ಕಿ ಪಡೆದಿದ್ದವು. ಉಳಿದ 10.94 ಲಕ್ಷ ಬಿಪಿಎಲ್​​ ಕುಟುಂಬ​​ಗಳು ಪಡಿತರ ಅಕ್ಕಿ ಪಡೆದಿರಲಿಲ್ಲ. 10.94 ಲಕ್ಷ ಕುಟುಂಬಗಳು ಅಂದರೆ, ಅಂದಾಜು 20 ಲಕ್ಷ ಜನ ಅಕ್ಕಿ ಪಡೆದಿಲ್ಲ. 20 ಲಕ್ಷ ಜನರಿಗೆ ಹಣ ಹಾಕದಿದ್ದರೆ 76 ಕೋಟಿ ರೂ. ಹಣ ಉಳಿತಾಯ ಆಗುತ್ತದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದಿಂದ ದೊರೆಯುತ್ತದೆ. ಹೆಚ್ಚುವರಿಯಾಗಿ 5 ಕೆಜಿ ರಾಜ್ಯ ಸರ್ಕಾರ ನೀಡಬೇಕಾಗಿದೆ. ಖರೀದಿಗೆ ಸಮಸ್ಯೆಯಾಗಿರುವುದರಿಂದ ಅಕ್ಕಿ ಬದಲಿಗೆ 170 ರೂ. ಹಣ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿತ್ತು.













































































error: Content is protected !!
Scroll to Top