6 ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗಳ ಪರವಾನಗಿ ರದ್ದು ಮಾಡಿದ ಮಹಾರಾಷ್ಟ್ರ ಸರಕಾರ

ಮುಂಬಯಿ : ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಆರು ಕೆಮ್ಮಿನ ಸಿರಪ್ ತಯಾರಿಸುವ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಸಚಿವರು ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕ ಆಶಿಶ್ ಶೇಲಾರ್ ಮತ್ತು ಇತರರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ಔಷಧ ಸಚಿವ ಸಂಜಯ್ ರಾಥೋಡ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಈ ಮಾಹಿತಿ ನೀಡಿದರು.

ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆಯೊಂದು ತಯಾರಿಸಿದ ಕೆಮ್ಮಿನ ಸಿರಪ್‌ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಸಂಸ್ಥೆಯ ಮೂವರು ಉದ್ಯೋಗಿಗಳನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಜಯ್‌ ರಾಥೋಡ್, ರಾಜ್ಯದಲ್ಲಿ 108 ಕೆಮ್ಮಿನ ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ನಾಲ್ಕು ಸಂಸ್ಥೆಗಳ ಉತ್ಪಾದನೆ ನಿಲ್ಲಿಸುವಂತೆ ಸೂಚನೆ
ಆರು ಕಂಪನಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದರೆ, ನಾಲ್ಕು ಸಂಸ್ಥೆಗಳಿಗೆ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ನಿಯಮಗಳ ಉಲ್ಲಂಘನೆ ಸಂಬಂಧ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಭಾರತದಿಂದ ಆಮದು ಮಾಡಿಕೊಳ್ಳಲಾದ ಕೆಮ್ಮಿನ ಸಿರಪ್‌ಗಳಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವಿಗೀಡಾಗಿದ್ದನ್ನು ಆಶಿಶ್ ಶೇಲಾರ್ ಉಲ್ಲೇಖಿಸಿದ್ದರು. ಆದರೆ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಕಂಪನಿಯು ಹರಿಯಾಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಆದಾಗ್ಯೂ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ನಾವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದೇವೆ. ರಾಜ್ಯದಿಂದ ಉತ್ಪನ್ನಗಳನ್ನು ರಫ್ತು ಮಾಡುವಾಗ ವಿಶ್ವ ಆರೋಗ್ಯ ಸಂಸ್ಥೆಯ ಜಿಎಂಪಿ ಪ್ರಮಾಣೀಕರಣ ಸಂಬಂಧಿತ ನಿಯಮಗಳು ಮತ್ತು ಔಷಧೀಯ ಉತ್ಪನ್ನಗಳ ಪ್ರಮಾಣಪತ್ರವನ್ನು ಹೊಂದಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸಚಿವರು ವಿವರ ನೀಡಿದರು. ಶೇ. 20ರಷ್ಟು ತಯಾರಕರು ಶಂಕಿತ ನಿಯಮಗಳ ಉಲ್ಲಂಘನೆಯ ಕಾರಣದಿಂದ ದಾಳಿಗಳನ್ನು ಎದುರಿಸಿದ್ದಾರೆ ಎಂದಾದರೆ ಇವರು ಜನರ ಜೀವನದ ಜೊತೆ ಚೆಲ್ಲಾಟವಾಡುವಂತಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಭಾಧ್ಯಕ್ಷ ಸಂಜಯ್ ಶಿರ್ಸತ್ ಹೇಳಿದರು.





























































































error: Content is protected !!
Scroll to Top