ಹೆಬ್ರಿ : ದೇವಸ್ಥಾನ ಜೀರ್ಣೋದ್ಧಾರದೊಂದಿಗೆ ಊರು ಸುಭಿಕ್ಷೆಗೊಳ್ಳುವುದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಶನಿವಾರ ಶಿವಪುರ ಶಂಕರದೇವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಆಶೀರ್ವಚನ ನೀಡಿದರು. ಇದೇ ಸಂದರ್ಭ ಪೇಜಾವರ ಮಠದ ಶಿವಪುರ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಣಿಕೆ ಸಮರ್ಪಿಸಿದರು.
ಗೋಶಾಲೆ ಜಮೀನು ವೀಕ್ಷಣೆ
ಅನಂತರ ಸ್ವಾಮೀಜಿ ಶಿವಪುರ ಕೆರೆಬೆಟ್ಟಿನಲ್ಲಿ ಸುಮಾರು ೧೩ ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಸರಕಾರಿ ಗೋಶಾಲೆಯ ಜಮೀನು ವೀಕ್ಷಣೆ ಮಾಡಿದರು. ಹೆಬ್ರಿಯ ಗಿಲ್ಲಾಳಿ ವಿಶ್ವೇಷಕೃಷ್ಣ ಗೋಶಾಲೆಗೆ ಬೇಟಿ ನೀಡಿದರು. ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ., ಸುರೇಶ ಶೆಟ್ಟಿ ಶಿವಪುರ, ಹೆಬ್ರಿ ಗುರುದಾಸ ಶೆಣೈ, ಹೆಬ್ರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಭಟ್, ಸಮಿತಿ ಸದಸ್ಯರು, ಸ್ಥಳೀಯ ಗಣ್ಯರು, ಅರ್ಚಕರು ಉಪಸ್ಥಿತರಿದ್ದರು.













