ಉಡುಪಿ : ಕೃಷ್ಣಾಪುರ ಮಠದಲ್ಲಿ ಪರ್ಯಾಯ ಪೀಠಾರೋಹಣ

ಉಡುಪಿ : ಇಂದು ಮಂಗಳವಾರ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂಭ್ರಮ. ಕೋವಿಡ್ ನಿರ್ಬಂಧಗಳ ನಡುವೆ ಸರಳವಾಗಿ ಸಾಂಪ್ರದಾಯಿಕವಾಗಿ ಮುಂಜಾನೆಯಿಂದಲೇ ವೈಭವಯುತವಾಗಿ ಪರ್ಯಾಯ ಆಚರಣೆ, ಮೆರವಣಿಗೆ ಸಾಗಿದವು. ಪ್ರತಿ ಬಾರಿ ಪರ್ಯಾಯ ಮೆರವಣಿಗೆಗೆ ಸೊಬಗು ತುಂಬುತ್ತಿದ್ದ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದು ಮಠದಿಂದ ಬೆರಳೆಣಿಕೆಯ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಉಡುಪಿ ಶ್ರೀಕೃಷ್ಣ ಮಠದ ಪೂಜಾಧಿಕಾರ ಹಸ್ತಾಂತರ ಸಮಾರಂಭವಾದ ಪರ್ಯಾಯೋತ್ಸವ ಇದಾಗಿದ್ದು, 2 ವರ್ಷಕ್ಕೊಮ್ಮೆ ನಡೆಯುವ ಈ ಸಮಾರಂಭದಲ್ಲಿ ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಿದರು. ಮಠದೊಳಗಿನ ಧಾರ್ಮಿಕ ಸಂಪ್ರದಾಯಗಳನ್ನು ಹೊರತುಪಡಿಸಿ, ಮಠದ ಹೊರಗಿನ ಸಾಂಸ್ಕೃತಿಕ ಗೌಜುಗದ್ದಲಗಳಿಗೆ ಕಡಿವಾಣ ಹಾಕಲಾಗಿತ್ತು. ಈ ಮೂಲಕ ಜನರ ಭಾಗವಹಿಸುವಿಕೆ ಇಲ್ಲದೆ ಸರಳ ಪರ್ಯಾಯೋತ್ಸವ ನಡೆಸಲಾಯಿತು. ಜ. 18ರ ಮುಂಜಾನೆ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆದ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ಮುಂಜಾನೆ 5.45ಕ್ಕೆ ಶ್ರೀ ಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರೆ ಬೆಳ್ಳಿಯ ಸಟ್ಟುಗ ಹಸ್ತಾಂತರಿಸಿ, ಬೆಳಗ್ಗೆ 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣ ನೆರವೇರಿಸಿದರು.





























































































error: Content is protected !!
Scroll to Top