ಹಸಿದ ಹೊಟ್ಟೆಗೆ ತತ್ವಶಾಸ್ತ್ರ ಉಪಯುಕ್ತವಲ್ಲ : ಗಡ್ಕರಿ

ಮುಂಬಯಿ , ಆ. 1 :  ದೀರ್ಘಕಾಲದ ಲಾಕ್‌ ಡೌನ್‌ನಿಂದ  ಕೊರೊನಾ ವೈರಸ್ ಗಿಂತ  ಗಂಭೀರ ಬಿಕ್ಕಟ್ಟು  ಸೃಷ್ಟಿಯಾಗಲಿದೆ ಎಂದಿರುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಕೊರೊನಾದೊಂದಿಗೆ ಬದುಕುವುದನ್ನು  ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿರುವುದರಿಂದ ಜನರ ಸುರಕ್ಷತೆ ಮತ್ತು ಆರ್ಥಿಕತೆಯ ನಡುವೆ ಸಮತೋಲನವನ್ನು ಸಾಧಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಹಸಿದ ಹೊಟ್ಟೆಗೆ ಯಾವುದೇ ತತ್ವಶಾಸ್ತ್ರವು ಉಪಯುಕ್ತವಲ್ಲ. ಕೊರೊನಾ  ಜೊತೆಗೆ ಹೇಗೆ ಬದುಕಬೇಕು ಎಂಬುದನ್ನು ನಾವು ಕಲಿಯಬೇಕಾಗಿದೆ. ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಆರ್ಥಿಕತೆಯನ್ನು ವೇಗಗೊಳಿಸಲು ನಾವು ಸಮತೋಲನವನ್ನು ಸಾಧಿಸಬೇಕಾಗಿದೆ ಎಂದು ಕರೆ ನೀಡಿದರು.

ಕೊರೊನಾ ವೈರಸ್‌ನಿಂದಾಗಿ ಜಾರಿಗೆ ಬಂದ ಲಾಕ್‌ಡೌನ್ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಮತ್ತು ಕೇಂದ್ರದ ಆದಾಯವೂ ಕಡಿಮೆಯಾಗಿದೆ ಎಂದು ಅವರು ಒಪ್ಪಿಕೊಂಡರು.

ದೀರ್ಘಕಾಲದ ಲಾಕ್‌ಡೌನ್ ಕೊರೊನಾ  ಸಾಂಕ್ರಾಮಿಕಕ್ಕಿಂತ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಹೇಳಿ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ ಗಡ್ಕರಿ ಲಾಕ್‌ಡೌನ್‌ನ ಲಾಭ ಮತ್ತು ನಷ್ಟ ಪ್ರಶ್ನಿಸುವ ವಿಷಯವಲ್ಲ ಎಂದರು.

ಲಾಕ್‌ಡೌನ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ಚರ್ಚಿಸುವುದು ಸರಿಯಲ್ಲ. ಆ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ನಾವು ಅನುಭವಗಳಿಂದ ಕಲಿಯಬೇಕಾಗಿದೆ. ಲಾಕ್‌ಡೌನ್‌ನಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದರು.

ಕೊರೊನಾ  ಬಿಕ್ಕಟ್ಟು ಮತ್ತು ನಂತರದ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ  ಸರ್ಕಾರಗಳು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಕೇಂದ್ರ ಸಚಿವರು ತಿಳಿಸಿದರು.



































































































































































error: Content is protected !!
Scroll to Top