ಬೆಂಗಳೂರು,ಜು.25 : ಕೊರೊನಾ ಉಳಿದೆಲ್ಲ ಉದ್ಯಮಗಳಂತೆ ಹೋಟೇಲ್ ಉದ್ಯಮವನ್ನೂ ಬಹಳ ಕಾಡಿದೆ. ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಹೊಟೇಲ್ ಉದ್ಯಮಕ್ಕೆ ನೆರವು ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಕೊರೊನಾ ಲೌಕ್ಡೌನ್ ನಂತರ ಹೊಟೇಲ್ಗಳನ್ನು ತೆರೆಯಲಾಗಿದ್ದರೂ ಕೊರೋನಾ ಭಯದಿಂದ ಗ್ರಾಹಕರು ಹೊಟೇಲ್ಗಳಿಗೆ ಭೇಟಿ ನೀಡುತ್ತಿಲ್ಲ. ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ವಾಣಿಜ್ಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊಟೇಲ್ಗಳಿಗೆ 2020-21 ನೇ ಸಾಲಿಗೆ ಆಸ್ತಿ ತೆರಿಗೆ ಮತ್ತು ಬೆಸ್ಕಾಂನ ನಿಗದಿತ ಶುಲ್ಕವನ್ನು ಮನ್ನಾ ಮಾಡಬೇಕು ಎಂದು ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
2020-21 ನೇ ಸಾಲಿನ ಸನ್ನದು ಶುಲ್ಕ ವಿನಾಯಿತಿ ನೀಡಿ, ಉಳಿದ ಶುಲ್ಕ ಕಟ್ಟಲು ಆರು ಕಂತುಗಳ ಅವಕಾಶ ನೀಡಬೇಕು. ಈಗಾಗಲೇ ಸನ್ನದು ಶುಲ್ಕ ತುಂಬಿದವರ ಶುಲ್ಕವನ್ನು ಮುಂದಿನ ವರ್ಷದ ತೆರಿಗೆ ಶುಲ್ಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಹಾಗೂ ಹೊಟೇಲ್ ಕಾರ್ಮಿಕರಿಗೆ ಸಹಾಯಧನದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.