ಉಡುಪಿ : ಕಾಪು ತಾಲೂಕಿನ ಮುದರಂಗಡಿಯಲ್ಲಿ ಜು. 7ರ ಹಾಡಹಗಲೇ ಗ್ರಾ.ಪಂ. ಮಾಜಿ ಅಧ್ಯಕ್ಷ, ಉದ್ಯಮಿ ಡೇವಿಡ್ ಡಿಸೋಜಾರನ್ನು ಹತ್ಯೆಗೈದ ಹಂತಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಂತಕ ರಾಜುನನ್ನು 7 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಪು ಠಾಣೆ ಪಿಎಸ್ಐ ತೇಜಸ್ವಿ ಟಿ.ಐ., ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಎಂ.ಎಸ್., ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಹಾಗೂ ಬೈಂದೂರು ಪಿಎಸ್ಐ ಮಹೇಶ್ ಅವರ ತಂಡವು ಹಂತಕನನ್ನು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ ಕರೆತರುತ್ತಿರುವಾಗ ಬೈಂದೂರು ಸಮೀಪ ಒತ್ತಿನೆಣೆಯಲ್ಲಿ ಆತ ಪೊಲೀಸರಿಗೆ ಹಲ್ಲೆ ನಡೆಸಿ, ಫೈರ್ ಮಾಡಲು ಮುಂದಾದಾಗ ಕಾಪು ಪಿಎಸ್ಐ ತೇಜಸ್ವಿಯವರು ತಮ್ಮ ಸರ್ವಿಸ್ ಪಿಸ್ತೂಲಿನಿಂದ ರಾಜು ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 3.45 ರ ವೇಳೆಗೆ ಮುದರಂಗಡಿಯಲ್ಲಿನ ತನ್ನ ಕಚೇರಿಯಿಂದ ತೆರಳಲು ಕಾರು ಹತ್ತುತ್ತಿದ್ದ ಡೇವಿಡ್ನನ್ನು ಹಿಂದಿನಿಂದ ಬಂದ ಆರೋಪಿ 9ಎಂಎಂ. ಪಿಸ್ತೂಲಿನಿಂದ ತಲೆ ಗುಂಡು ಹಾರಿಸಿ ಬೈಕ್ನಲ್ಲಿ ಇಬ್ಬರು ಪರಾರಿಯಾಗಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸ್ಥಳದಲ್ಲಿ ದೊರೆತ ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚೆಕ್ ಪೋಸ್ಟ್ಗಳಲ್ಲಿ ತೀವ್ರ ತಪಾಸಣೆ ನಡೆಸಿದ ಪೊಲೀಸರಿಗೆ ಬಸ್ನಲ್ಲಿ ಮುಖವನ್ನು ಶಾಲ್ನ ಮೂಲಕ ಮುಚ್ಚಿಕೊಂಡಿದ್ದ ವ್ಯಕ್ತಿ ಕಂಡಿದ್ದಾನೆ. ಆತನನ್ನು ತಪಾಸಣೆಗೆ ಒಳಪಡಿಸಿದಾಗ, ಆತನ ಮೊಬೈಲ್ನಲ್ಲಿ ಹತ್ಯೆಯಾದ ಡೇವಿಡ್ನ ಪೋಟೊ ಪತ್ತೆಯಾಗಿದೆ. ಜೊತೆಗೆ ಆತನ ಖಾತೆಗೆ 50 ಸಾವಿರ ರೂ. ಜಮೆಯಾಗಿದೆ ಎಂದು ಹೇಳಲಾಗಿದೆ. ಮತ್ತೋರ್ವ ಆರೋಪಿ ಭಟ್ಕಳದಲ್ಲಿ ಪತ್ತೆಯಾಗಿದ್ದು ಆತನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಉತ್ತರ ಪ್ರದೇಶ ಮೂಲದವರು ಎನ್ನಲಾಗಿದೆ.
ಮೂಲತಃ ಚಿಕ್ಕಮಗಳೂರಿನರಾದ ತೇಜಸ್ವಿ ಟಿ.ಐ. ಅವರು ಈ ಹಿಂದೆ ಹೊನ್ನಾವರ, ಬಾಳೆಹೊನ್ನೂರು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ವವ್ಯ ನಿರ್ವಹಿಸಿದ್ದರು. 2021ರ ಜನವರಿಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಎಸ್ಐ ಆಗಿ ಕರ್ತವ್ಯ ವಹಿಸಿದ್ದ ತೇಜಸ್ವಿ ಅವರು ಎರಡೂವರೆ ವರ್ಷಗಳ ಕಾಲ ಜನಮೆಚ್ಚುಗೆ ಗಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು.















