ಕಾರ್ಕಳ : ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿ ಪೋಸ್ಟ್ಗಳನ್ನು ಮಾಡುತ್ತಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಕಾರ್ಕಳ ಯೂತ್ ಬಿಲ್ಲವ ಸಂಘಟನೆ ಜೂ.10ರಂದು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ದೂರಿನಲ್ಲಿ ಅನಿತಾ ಕಾಸರ್ಗೋಡ್ ಎನ್ನುವ ಫೇಸ್ಬುಕ್ ಹೆಸರು ಹೊಂದಿರುವ ತನ್ನ ಖಾತೆಯಲ್ಲಿ ವಿವಿಧ ಗುಂಪುಗಳ ನಡುವೆ ಮತ, ಧರ್ಮ, ಜನಾಂಗ, ಜಾತಿಯ ಅಥವಾ ಸಮುದಾಯಗಳ ನಡುವೆ ವೈಷಮ್ಯ, ವೈರತ್ವವನ್ನು ಉತ್ತೇಜಿಸುವ ದುರುದ್ದೇಶದಿಂದ “ಬಿಲ್ಲವರೇ, ಶೆಟ್ಟಿಗಳೇ, ನನ್ನ ಕೆಣಕಲು ಬಂದವರು ಉದ್ಧಾರ ಆಗಿಲ್ಲ, ಬ್ರಾಹ್ಮಣ ಸಮುದಾಯದ ಹೆಂಗಸು ನಾನು, ನಿಮ್ಮನ್ನು ನನ್ನ ಕಾಲಿಗೆ ಬೀಳಿಸುತ್ತೀನಿ ನೋಡ್ತಾ ಇರಿ” ಹಾಗೂ “ಬಡ್ಡಿ ಮಕ್ಕಳು ಬಿಲ್ಲವರಿಗೆ ನನ್ನ ಎದುರಿಸಲು ಆಗ್ತಾ ಇಲ್ಲ” “ಬಿಲ್ಲವರಲ್ಲಿ ಕ್ಷಮೆ ಕೇಳಬೇಕಂತೆ, ನಿಮ್ಮ ಭ್ರಮೆ ಅದು, ನಿಮ್ಮ ಸಮುದಾಯದ ಅವನತಿ ನನ್ನಿಂದಲೇ ಆಗುತ್ತೆ ಅನಿಸುತ್ತೆ” ಎಂದು ಹಾಗೂ ಒಂದು ವೀಡಿಯೋ ಮಾಡಿ ಅದರಲ್ಲಿ “ಬರೀ ಹಲ್ಕಟ್ಗಳು ಹಿಂದೂಗಳು ಹಾಗೂ ಅದರಲ್ಲಿ ಶೆಟ್ಟಿ ಹಾಗೂ ಬಿಲ್ಲವರು” ಎನ್ನುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುತ್ತಾರೆ. ಇದು ಬಿಲ್ಲವರಾದ ನಮಗೆ ಮಾನಸಿಕವಾಗಿ ಆಘಾತವಾಗಿರುತ್ತದೆ. ಆರೋಪಿತರು ನಿರಂತರವಾಗಿ ಫೇಸ್ಬುಕ್ನಲ್ಲಿ ಬಿಲ್ಲವ ಸಮುದಾಯವನ್ನು ಅವಹೇಳನಗೊಳಿಸುವಂತಹ ಹಾಗೂ ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಹ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಈ ಸಂದರ್ಭ ಯೂತ್ ಬಿಲ್ಲವ ಅಧ್ಯಕ್ಷ ಸುಕೇಶ್ ಕರ್ಕೇರ, ಸ್ಥಾಪಕಾಧ್ಯಕ್ಷ ಭರತ್ ಸಿ. ಅಂಚನ್, ಸದಸ್ಯರಾದ ಪ್ರವೀಣ್ ಪಿ., ವಿಶಾಲ್ ಸಾಲಿಯಾನ್, ಸುನಿಲ್ ನೆಲ್ಲಿಗುಡ್ಡೆ, ಸಂದೇಶ್ ಕೋಟ್ಯಾನ್, ಅನಿಲ್ ಪೂಜಾರಿ, ಸುಧೀರ್ ಪೂಜಾರಿ, ಜಗದೀಶ್ ಪೂಜಾರಿ, ಅಕ್ಷಯ್ ಬಂಗೇರ, ರವೀಂದ್ರ ಪೂಜಾರಿ, ಅಭಿಲಾಷ್ ಪೂಜಾರಿ, ಶಿವಣ್ಣ, ಶ್ರೇಯಸ್ ಪೂಜಾರಿ, ಕಾರ್ತಿಕ್ ಸುವರ್ಣ ಹಾಗೂ ಸುಜಿತ್ ನಿಟ್ಟೆ ಉಪಸ್ಥಿತರಿದ್ದರು.










