ಕಾರ್ಕಳದ ಕಲಿ ಆಯುಷ್‌ ಶೆಟ್ಟಿಗೆ ಏಷ್ಯಾ ಬ್ಯಾಡ್ಮಿಂಟನ್‌ ಫೈನಲ್‌ ಪ್ರವೇಶ: ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿ ಇತಿಹಾಸ

​ನಿಂಗ್ಬೊ (ಚೀನಾ) : ಕಾರ್ಕಳ ಸಾಣೂರಿನ ಉದಯೋನ್ಮುಖ ಪ್ರತಿಭೆ ಆಯುಷ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಕ್ಷರಶಃ ವಿಶ್ವವನ್ನೇ ಬೆರಗುಗೊಳಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವದ ನಂಬರ್ 1 ಆಟಗಾರ ಥಾಯ್ಲೆಂಡ್‌ನ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
​ಐತಿಹಾಸಿಕ ಜಯ:
20 ವರ್ಷದ ಭರವಸೆಯ ಆಟಗಾರ ಆಯುಷ್‌ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ವಿಟಿಡ್ಸರ್ನ್ ವಿರುದ್ಧ 10-21, 21-19, 21-17 ಅಂತರದಲ್ಲಿ ರೋಚಕ ಜಯ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸೋತು ಹಿನ್ನಡೆ ಅನುಭವಿಸಿದರೂ ದೃತಿಗೆಡದ ಕಾರ್ಕಳದ ಈ ಪ್ರತಿಭೆ, ದ್ವಿತೀಯ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಅದ್ಭುತ ಚೇತರಿಕೆ ಕಂಡು ಇತಿಹಾಸ ನಿರ್ಮಿಸಿದ್ದಾರೆ. ​ಈ ಗೆಲುವಿನೊಂದಿಗೆ ಆಯುಷ್ ಶೆಟ್ಟಿ ಮಹತ್ತರ ಸಾಧನೆಯೊಂದಕ್ಕೆ ಪಾತ್ರರಾಗಿದ್ದಾರೆ. ​

61 ವರ್ಷಗಳ ದಾಖಲೆ
1965ರಲ್ಲಿ ದಿನೇಶ್ ಖನ್ನಾ ಅವರ ಅನಂತರ ಈ ಪ್ರತಿಷ್ಠಿತ ಕಾಂಟಿನೆಂಟಲ್ ಟೂರ್ನಿಯ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಕೀರ್ತಿ ಆಯುಷ್ ಪಾಲಾಗಿದೆ. ಸೆಮಿಫೈನಲ್ ಪ್ರವೇಶದೊಂದಿಗೆ ಪದಕ ಖಚಿತಪಡಿಸಿಕೊಂಡಿದ್ದ ಅವರು 2018ರಲ್ಲಿ ಎಚ್.ಎಸ್. ಪ್ರಣಯ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ.

ಸಾಗಿ ಬಂದ ಹಾದಿ
​ಸಾಣೂರಿನ ಈ ಯುವ ಆಟಗಾರ ಈ ಟೂರ್ನಿಯುದ್ದಕ್ಕೂ ದೈತ್ಯ ಸಂಹಾರಿಯಾಗಿಯೇ ಹೊರಹೊಮ್ಮಿದ್ದಾರೆ. ಅವರ ಈ ಹಾದಿ ಅಪ್ರತಿಮವಾದುದು. ​ಮೊದಲ ಸುತ್ತಿನಲ್ಲಿ ವಿಶ್ವದ 7ನೇ ಶ್ರೇಯಾಂಕಿತ ಲಿ ಶಿ ಫೆಂಗ್ ವಿರುದ್ಧ ಭರ್ಜರಿ ಜಯ. ​ಎರಡನೇ ಸುತ್ತಿನಲ್ಲಿ ಚೀನಾದ ಚೆನ್ ಯು ಜೆನ್ ಅವರಿಗೆ ಸೋಲು. ​ಕ್ವಾರ್ಟರ್ ಫೈನಲ್ ನಲ್ಲಿ ವಿಶ್ವದ 4ನೇ ಶ್ರೇಯಾಂಕಿತ ಜೊನಾಥನ್ ಕ್ರಿಸ್ಟಿ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ.

ಕಾರ್ಕಳ ತಾಲೂಕಿನ ಸಾಣೂರಿನಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿರುವ ಆಯುಷ್ ಶೆಟ್ಟಿ ಅವರ ಈ ಸಾಧನೆ ಕರಾವಳಿ ಕರ್ನಾಟಕಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. 2023ರಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಗೆದ್ದಿದ್ದ ಪದಕದ ಬಳಿಕ, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಡುವ ಭರವಸೆ ಆಯುಷ್ ಅವರ ಮೇಲಿದೆ. ​ನಾಳೆಯ ಫೈನಲ್ ಪಂದ್ಯವು ಕಾರ್ಕಳದ ಈ ಆಯುಷ್ ಶೆಟ್ಟಿ ಪಾಲಿಗೆ ಮತ್ತು ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯುವ ನಿರೀಕ್ಷೆ ಮೂಡಿಸಿದೆ. ಆಯುಷ್ ಶೆಟ್ಟಿ ಸಾಣೂರಿನ ಮಿತ್ತಲ ಮನೆಯ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ.











































































error: Content is protected !!
Scroll to Top