ದೆಹಲಿ : ಆಪರೇಷನ್ ಸಿಂಧೂರ್ ಕೇವಲ ಟ್ರೇಲರ್ ಅಷ್ಟೇ, ಸರಿಯಾದ ಸಮಯ ಬಂದಾಗ ಪೂರ್ಣ ಚಿತ್ರವನ್ನು ತೋರಿಸುತ್ತೇವೆ ಎಂದು ಭುಜ್ ವಾಯುನೆಲೆಯಿಂದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಒಂದು ದಿನದ ನಂತರ ರಾಜನಾಥ್ ಸಿಂಗ್ ಭುಜ್ಗೆ ಭೇಟಿ ನೀಡಿ ಪಹಲ್ಗಾಮ್ನಲ್ಲಿ ಸಾವನ್ನಪ್ಪಿದ್ದ ಮುಗ್ಧ ನಾಗರಿಕರು ಹಾಗೂ ಆಪರೇಷನ್ ಸಿಂಧೂರ್ನಲ್ಲಿ ಹುತಾತ್ಮರಾದ ಸೈನಿಕರಿಗೆ ನಮನ ಸಲ್ಲಿಸಿದರು.
ಕಳೆದ ವಾರ ಪಾಕಿಸ್ತಾನಿ ಸೇನೆಯು ಈ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿತ್ತು. ಅವರ ದುಷ್ಟ ಯೋಜನೆಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿದ್ದವು.
ಈ ಭುಜ್ 1971 ರಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಂದು ಮತ್ತೊಮ್ಮೆ ಈ ಭುಜ್ ಪಾಕಿಸ್ತಾನದ ವಿರುದ್ಧ ನಮ್ಮ ಗೆಲುವಿಗೆ ಸಾಕ್ಷಿಯಾಗಿದೆ. ಇಲ್ಲಿಯ ಮಣ್ಣಿನಲ್ಲಿ ದೇಶಭಕ್ತಿಯ ಪರಿಮಳವಿದೆ ಮತ್ತು ಇಲ್ಲಿನ ಸೈನಿಕರು ಭಾರತವನ್ನು ರಕ್ಷಿಸುವ ಅಚಲವಾದ ಸಂಕಲ್ಪವನ್ನು ಹೊಂದಿದ್ದಾರೆ. ವಾಯುಪಡೆಯ ಯೋಧರು ಸೇರಿದಂತೆ ಸಶಸ್ತ್ರ ಪಡೆಗಳು ಮತ್ತು ಬಿಎಸ್ಎಫ್ನ ಎಲ್ಲಾ ಧೈರ್ಯಶಾಲಿ ಸೈನಿಕರಿಗೆ ನಾನು ನಮಸ್ಕರಿಸುತ್ತೇನೆ ಎಂದರು.










