ರಸ್ತೆ ಹದಗೆಟ್ಟಿರುವುದನ್ನು ಪ್ರತಿಭಟಿಸಿದ ಮಾಜಿ ಅಧ್ಯಕ್ಷೆಯ ನಿಂದನೆ
ಕಾರ್ಕಳ: ಕಡ್ತಲ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷೆಯ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಐಡಿಯ ಮೂಲಕ ಅವಹೇಳನಕಾರಿ, ಮಾನಹಾನಿಕರ ಸಂದೇಶ ಪೋಸ್ಟ್ ಮಾಡಿದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಕುಲಾಲ ಸಂಘ ಪೆರ್ಡೂರು ಆಗ್ರಹಿಸಿದೆ.
ಕಡ್ತಲ ಮತ್ತು ಅಂಡಾರು ಗ್ರಾಮಗಳ ರಸ್ತೆ ಹದಗೆಟ್ಟಿದ್ದು, ದುರಸ್ತಿಪಡಿಸುವ ಸಲುವಾಗಿ ಪಂಚಾಯತ್ನ ಮಾಜಿ ಅಧ್ಯಕ್ಷೆ ಹಾಗೂ ಎರಡು ಗ್ರಾಮಗಳ ಗ್ರಾಮಸ್ಥರು ಅಂಡಾರು ಗ್ರಾಮದಲ್ಲಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆಯ ವಿಡಿಯೋ ಯುಟ್ಯೂಬ್ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು. ಈ ವಿಡಿಯೋಗೆ ಫೇಕ್ ಐಡಿಯ ಮೂಲಕ ಅವಹೇಳನಕಾರಿ ಮತ್ತು ಮಾನಹಾನಿಕಾರಕ ಸಂದೇಶ ಕಮೆಂಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬರೆದಿದ್ದಾರೆ.
ಈ ಸಂದೇಶವನ್ನು ಸಂದೀಪ್ ಶೆಟ್ಟಿ ಕುಕ್ಕುಜೆ ಹಾಗೂ ಪುರಂದರ ನಾಯಕ್ ಕಡ್ತಲ ಎಂಬವರು ವಾಟ್ಸಾಪ್ ಗ್ರೂಪ್ಗಳಿಗೆ ಹರಿಯಬಿಟ್ಟಿದ್ದಾರೆ. ಇದರಿಂದ ಮಾಜಿ ಅಧ್ಯಕ್ಷೆಗೆ ಮಾನಹಾನಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ದೂರು ನೀಡಲಾಗಿದೆ. ಈ ಬಗ್ಗೆ ಉಡುಪಿ ಎಸ್ಪಿ ಅವರಿಗೆ ಮನವಿ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಕುಲಾಲ ಸಂಘ ಪೆರ್ಡೂರು ತಿಳಿಸಿದೆ.
































