ಬೆಂಗಳೂರು : ಆರ್ಎಸ್ಎಸ್ ಅಂಗಸಂಸ್ಥೆಗಳಿಗೆ ಬಿಜೆಪಿ ಸರಕಾರ ಮಂಜೂರು ಮಾಡಿದ್ದ ನೂರಾರು ಎಕರೆ ಸರಕಾರಿ ಭೂಮಿಯನ್ನು ವಾಪಸ್ ಪಡೆಯಲು ಕಾಂಗ್ರೆಸ್ ಸರಕಾರವು ಕ್ರಮ ತೆಗೆದುಕೊಂಡಿದೆ
ಈ ಸಂಬಂಧ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೆಸ್ಸೆಸ್ಗೆ ಸೇರಿದ ಜನಸೇವಾ ಟ್ರಸ್ಟ್ಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ತಾವರೆಕೆರೆ ಹೋಬಳಿಯಲ್ಲಿ ಹಿಂದಿನ ಬಿಜೆಪಿ ಸರಕಾರ 35 ಎಕರೆ 33 ಗುಂಟೆ ಗೋಮಾಳ ಜಮೀನು ನೀಡಿತ್ತು. ಕಳೆದ ಸೆಪ್ಟೆಂಬರ್ನಲ್ಲಿ ಗೋಮಾಳ ಭೂಮಿಯನ್ನು ಬಿಜೆಪಿ ಜನಸೇವಾ ಟ್ರಸ್ಟ್ಗೆ ನೀಡಿತ್ತು. 2023ರ ಮೇ 22ರಂದು ಜಿಲ್ಲಾಧಿಕಾರಿ ಮಂಜೂರು ಆದೇಶ ಹೊರಡಿಸಿದ್ದರು. ಗೋಮಾಳವು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಿದ ಸರಕಾರಿ ಭೂಮಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಎಷ್ಟು ಸರಕಾರಿ ಜಮೀನನ್ನು ಸಂಘ ಸಂಸ್ಥೆಗಳಿಗೆ, ಇಲಾಖೆಗಳಿಗೆ ಮತ್ತು ವಿವಿಧ ಉದ್ದೇಶಗಳಿಗೆ ನೀಡಲಾಗಿದೆ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನಸೇವಾ ಟ್ರಸ್ಟ್ಗೆ 35 ಎಕರೆ 33 ಗುಂಟೆ ಮಂಜೂರು ಮಾಡುವುದನ್ನು ತಡೆಹಿಡಿಯಲಾಗಿದೆ ಎಂಬ ಮುಖ್ಯಮಂತ್ರಿಯವರ ಸೂಚನೆಯನ್ನು ಉಲ್ಲೇಖಿಸಿದ್ದಾರೆ.

2019 ಮತ್ತು 2022ರ ನಡುವೆ ಬಿಜೆಪಿ ಅಧಿಕಾರದಲ್ಲಿದ್ದಾಗ ಆದಿಚುಂಚುನಗಿರಿ ಮಠ, ಸಿದ್ದಗಂಗಾ ಮಠ, ಇಸ್ಕಾನ್, ರಾಷ್ಟ್ರೋತ್ಥಾನ ಪರಿಷತ್, ಕರ್ನಾಟಕ ಲಾನ್ ಟೆನಿಸ್ ಸಂಘ, ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಒಂಬತ್ತು ಜಿಲ್ಲೆಗಳಲ್ಲಿ 252.36 ಎಕರೆ ಗೋಮಾಳ ಭೂಮಿ ಮಂಜೂರಾಗಿದೆ. ಅವಸರದ ಹಂಚಿಕೆಗಳ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ, ಇದರಲ್ಲಿ ಅರ್ಹವಲ್ಲದ ಅನುದಾನಗಳು ಸೇರಿವೆ ಎಂದು ಕೃಷ್ಣ ಬೈರೇಗೌಡ ಹೇಳಿದರು. ಗೋಶಾಲೆಯ ಉದ್ದೇಶಕ್ಕಾಗಿ ಒಂದು ಲಾಭ ರಹಿತ ಸಂಸ್ಥೆಗೆ 35 ಎಕರೆ ಭೂಮಿಯನ್ನು ನೀಡಲಾಗಿದೆ ಎಂದು ಸಚಿವರು ಗಮನಸೆಳೆದರು.































