ರಂಗನಪಲ್ಕೆಯಲ್ಲಿ ಸೋಲಾರ್ ಪರಿಕರ ; ಮಲ್ಲಿಗೆ ಗಿಡ ವಿತರಣೆ

ಕಾರ್ಕಳ, ನ. 4 : ಕಾರ್ಕಳ ತಾಲೂಕು ಬೈಲೂರು ವಲಯದ ಕಣ೦ಜಾರು ಒಕ್ಕೂಟ ಆಶ್ರಯದಲ್ಲಿ 2829 ಸ್ವಸಹಾಯ ಸಂಘಗಳಿಗೆ ದಾಖಲಾತಿ ಹಸ್ತಾಂತರಿಸುವ ಕಾರ್ಯಕ್ರಮ ರಂಗನಪಲ್ಕೆ ಎಳಿಯಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ತಾಲೂಕು ಮಟ್ಟದ ಕರಾವಳಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಅವರು ಉದ್ಘಾಟಿಸಿ ದಾಖಲಾತಿ ಹಸ್ತಾಂತರಿಸಿದರು.
ಸಂಘದ ಸದಸ್ಯರು ನಿಯಮಗಳನ್ನು ಪಾಲಿಸುವುದರೊಂದಿಗೆ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸೆಲ್ಕೋ ಸೋಲಾರ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ಗುರು ಪ್ರಕಾಶ್ ಶೆಟ್ಟಿ, ವಿಜಯ ಸೋಲಾರ್ ಸಂಸ್ಥೆಯ ಮುಖ್ಯಸ್ಥ ಗಿರೀಶ್ ಅವರು ಸೋಲಾರ್ ಪರಿಕರಗಳನ್ನು ವಿತರಿಸಿದರು. ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ವಿಕ್ರಮ್ ಹೆಗ್ಡೆಯವರು ಸ್ವ ಉದ್ಯೋಗ ಕಾರ್ಯಕ್ರಮದಡಿ ಮಲ್ಲಿಗೆ ಗಿಡಗಳನ್ನು ಹಸ್ತಾಂತರಿಸಿದರು.ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗದೀಶ್ ತೆಂಡೂಲ್ಕರ್, ಎಳಿಯಾಲ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ರಾವ್, ಕಾರ್ಕಳ ತಾಲೂಕು ಯೋಜನಾಧಿಕಾರಿ ಭಾಸ್ಕರ್ ವಿ., ಎಸ್‌ಡಿಎಂಸಿ ಉಪಾಧ್ಯಕ್ಷೆ ಶರಾವತಿ ಉಪಸ್ಥಿತರಿದ್ದರು.
ನಿಕಟಪೂರ್ವ ವಲಯಾಧ್ಯಕ್ಷ ಅಬ್ದುಲ್ ಸಲಾಂ ಸ್ವಾಗತಿಸಿ, ಬೈಲೂರು ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ ನಿರೂಪಿಸಿದರು. ಸೇವಾ ಪ್ರತಿನಿಧಿ ಸುಜೀರ್ ಕುಲಾಲ್ ವಂದಿಸಿದರು. ಕಣಂಜಾರು ಒಕ್ಕೂಟದ , ಪದಾಧಿಕಾರಿಗಳು, ಸ್ವಸಹಾಯ ಹಾಗೂ ಪ್ರಗತಿ ಬಂಧು ಸಂಘದ ಸದಸ್ಯರು ಉಪಸ್ಥಿತರಿದ್ದರು.













































































error: Content is protected !!
Scroll to Top