ಹೆಬ್ರಿ, ಅ.18 : ಕಲಾ ಬದ್ದತೆ,ತಪಸ್ಸು ಮತ್ತು ಶ್ರಮದಿಂದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ವಿಶ್ವಮಾನ್ಯವಾಗಿದೆ, ಇಡೀ ಕುಟುಂಬವನ್ನೇ ಕಲೆಗೆ ಸಮರ್ಪಣೆ ಮಾಡಿಕೊಂಡು ಕಲೆ ಮತ್ತು ನಾಡಿಗೆ ಅಪಾರ ಕೊಡುಗೆ ನೀಡಿದೆ. ಅತ್ಯಂತ ಗ್ರಾಮೀಣ ಪ್ರದೇಶವನ್ನು ಕಲೆಯ ಆರಾಧನಾ ಕೇಂದ್ರವಾಗಿ ಮಾಡಿ ವಿಶ್ವದೆತ್ತರಕ್ಕೆ ಏರಿದೆ ಎಂದು ಕಲಾ ಪೋಷಕರಾದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಶನಿವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾಸಂಘಟನೆ ವತಿಯಿಂದ ಬಿ.ವಿ.ಕಾರಂತ ಬಯಲು ರಂಗಮಂದಿರದಲ್ಲಿ 9 ದಿನಗಳ ಕಾಲ ನಡೆಯುವ ನಾಟ್ಕ ಮುದ್ರಾಡಿ 20ನೇ ನವರಂಗೋತ್ಸವ – ಅಖಿಲ ಭಾರತ ರಂಗೋತ್ಸವದಲ್ಲಿ ಕರ್ಣಾಟ ನಾಡಪೋಷಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಮುದ್ರಾಡಿ ನಾಟ್ಕದೂರು ನಮತುಳುವೆರ್ ನಾಟ್ಕ ಮುದ್ರಾಡಿ 20ನೇ ನವರಂಗೋತ್ಸವ – ಅಖಿಲ ಭಾರತ ರಂಗೋತ್ಸವವನ್ನು ಶನಿವಾರ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ಕುಮಾರ್ ಉದ್ಘಾಟಿಸಿದರು.
ನಮ ತುಳುವೆರ್ ಕಲಾ ಸಂಘಟನೆಯ ಸಂಚಾಲಕರಾದ ಧರ್ಮದರ್ಶಿ ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕಲಾ ಪೋಷಕರಾದ ಉದ್ಯಮಿ ಕುಯಿಲಾಡಿ ಸುರೇಶ್ನಾಯಕ್ ಅವರಿಕೆ 2020ನೇ ಸಾಲಿನ ಕರ್ಣಾಟ ನಾಡಪೋಷಕ ಪ್ರಶಸ್ತಿ ಮತ್ತು ರಂಗ ನಟ ನಿರ್ದೇಶಕರಾದ ಬ್ರಹ್ಮಾವರದ ರವಿ.ಎಸ್.ಪೂಜಾರಿ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಂಗ ನಟಿ, ನಿರ್ದೇಶಕಿ ಪೂರ್ಣಿಮಾ ಸುರೇಶ್ ನಾಯಕ್, ಉದ್ಯಮಿ ವಿಜಯ ಶೆಟ್ಟಿ ಕಾರ್ಕಳ, ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಕಮಲಾ ಮೋಹನ್, ವಾಣಿ ಸುಕುಮಾರ್, ಸುಗಂಧಿ ಉಮೇಶ್ ಕಲ್ಮಾಡಿ ಮುಂತಾದವರು ಇದ್ದರು. ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನ ಶಿಕ್ಷಕರಿಂದ “ಯಕ್ಷಪಾಠ” ಯಕ್ಷಗಾನ ತಾಳಮದ್ದಳೆ ನಡೆಯಿತು.












