ಲಕ್ನೊ : 8 ಪೊಲೀಸರು ಬಲಿಯಾದ ಕಾರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕಾನ್ಪುರ ಎನ್ಕೌಂಟರ್ ಪ್ರಕರಣದ ಮುಖ್ಯ ಆರೋಪಿ ವಿಕಾಸ್ ದುಬೆ ಉಜ್ಜಯಿನಿಯಲ್ಲಿ ಸೆರೆಯಾಗಿದ್ದಾನೆ. . ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ್ ದೇವಸ್ಥಾನಕ್ಕೆ ದರ್ಶನಕ್ಕಾಗಿ ತೆರಳಿದ್ದ ವೇಳೆ ಅವನನ್ನು ಪೊಲೀಸರು ಬಂಧಿಸಿದ್ದಾರೆ. ದೇವಾಲಯದ ಕಾವಲುಗಾರರು ವಿಕಾಸ್ ದುಬೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು . ವಿಕಾಸ್ ದುಬೆಯನ್ನು ಬಂಧಿಸಲು ಒಟ್ಟು ಐದು ರಾಜ್ಯಗಳ ಪೊಲೀಸರು ಜಾಲ ಬೀಸಿದ್ದರು.
ಕುಖ್ಯಾತ ಗೋಂಡಾನಾಗಿರುವ ದುಬೆಯ ಬಂಧನವನ್ನು ದೃಢಪಡಿಸಿರುವ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ವಿಕಾಸ್ ದುಬೆಯನ್ನು ಸದ್ಯ ಮಧ್ಯ ಪ್ರದೇಶದ ಪೋಲೀಸರ ಕಸ್ಟಡಿಯಲ್ಲಿರಿಸಲಾಗಿದೆ. ಆತನ ಬಂಧನ ಹೇಗೆ ನಡೆಸಲಾಗಿದೆ ಎಂಬುದನ್ನು ಹೇಳುವುದು ಉಚಿತವಲ್ಲ. ದೇವಸ್ಥಾನದ ಒಳಗೆ ಅಥವಾ ಹೊರಗೆ ಎಲ್ಲಿ ಆತನನ್ನು ಬಂಧಿಸಲಾಗಿದೆ ಹೇಳುವುದು ಉಚಿತವಲ್ಲ. ಕ್ರೂರತೆಯ ಎಲ್ಲ ಎಲ್ಲೆಯನ್ನು ವಿಕಾಸ್ ದುಬೆ ಮೀರಿದ್ದ, ಕಾನ್ಪುರ ಎನ್ ಕೌಂಟರ್ ಬಳಿಕ ನಾವು ಮಧ್ಯ ಪ್ರದೇಶದ ಪೋಲೀಸರನ್ನು ಹೈ ಅಲರ್ಟ್ನಲ್ಲಿ ಮೇಲೆ ಇರಿಸಿದ್ದೆವು” ಎಂದಿದ್ದಾರೆ.
ಇದಕ್ಕೂ ಮೊದಲು ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಎನ್ಕೌಂಟರ್ನಲ್ಲಿ ಪೊಲೀಸರು ಮಟ್ಟ ಹಾಕಿದ್ದರು. ಪ್ರಭಾತ್ ಮಿಶ್ರಾ ಎಂಬಾತ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ, ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಪ್ರಭಾತ್ ಮಿಶ್ರಾನನ್ನು ಫರಿದಾಬಾದ್ನಿಂದ ಬುಧವಾರ ಬಂಧಿಸಲಾಗಿತ್ತು. ಇದಲ್ಲದೆ, ವಿಕಾಸ್ ದುಬೆ ಗ್ಯಾಂಗ್ನ ಮತ್ತೊಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಬನ್ ಶುಕ್ಲಾನನ್ನು ಇಟವಾದಲ್ಲಿ ಮಟ್ಟ ಹಾಕಲಾಗಿದೆ.
ಪ್ರಭಾತ್ ಮಿಶ್ರಾನನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸರ ವಾಹನ ಪಂಕ್ಚರ್ ಆದ ಕಾರಣ ಅವಕಾಶ ಬಳಸಿ ಪೋಲೀಸ್ ಕಾನ್ಸ್ಟೆಬಲ್ ಒಬ್ಬರ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ ಪೊಲೀಸರ ಮೇಲೆ ಫೈರಿಂಗ್ ನಡೆಸಿದ್ದು, ಈ ದಾಳಿಯಲ್ಲಿ STFನ ಇಬ್ಬರು ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಎನ್ಕೌಂಟರ್ನಲ್ಲಿ ಪ್ರಭಾತ್ ಮಿಶ್ರಾ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.ಬುಧವಾರ ಪೊಲೀಸರು ಪ್ರಭಾತ್ ಮಿಶ್ರಾನನ್ನು ಆತನ ಇಬ್ಬರು ಸಹಚರರೊಂದಿಗೆ ಬಂಧಿಸಿದ್ದರು. ಆತನ ಬಳಿಯಿಂದ 4 ಪಿಸ್ತೂಲ್ ವಶಪಡಿಸಿಕೊಂಡಿದ್ದು, ಇವುಗಳಲ್ಲಿ ಪೊಲೀಸರಿಂದ ಲೂಟಿ ಮಾಡಿದ್ದ 9mm ನ 2 ಪಿಸ್ತೂಲ್ ಗಳು ಕೂಡ ಸೇರಿವೆ.