ಕರ್ನಾಟಕ ಲೇವಾದೇವಿದಾರರ ಅಧಿನಿಯಮ

ಕರ್ನಾಟಕ ರಾಜ್ಯದ ಒಳಗಿನ ಪ್ರದೇಶದಲ್ಲಿ ನಡೆಸುವಂತಹ ಲೇವಾದೇವಿ ವ್ಯವಹಾರ ಅಂದರೆ ಸಾಲವನ್ನು ನೀಡುವ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸುವ ಮತ್ತು ಸಾಲಗಾರರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಮುಗ್ಧ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ದೃಷ್ಟಿಯಿಂದ ಸರಕಾರವು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಎಂಬ ಕಾನೂನನ್ನು ಕಳೆದ 29-03-1962 ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಜ್ಯಾರಿಗೆ ತಂದಿರುತ್ತದೆ.

ಈ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ರಾಜ್ಯದಲ್ಲಿ ಲೇವಾದೇವಿ ವ್ಯವಹಾರವನ್ನು ನಡೆಸಲು ಸರಕಾರದಿಂದ ನಿಯಮಿಸಲ್ಪಟ್ಟ ಸಹಾಯಕ ರಿಜಿಸ್ಟಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಕಾನೂನಿನ ನಿಯಮಾನುಸಾರವಾದ ಲೇವಾದೇವಿ ಲೈಸೆನ್ಸ್‌ನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಈ ರೀತಿಯಾಗಿ ಸರಕಾರದಿಂದ ಸೂಕ್ತ ಲೈಸೆನ್ಸ್‌ನ್ನು ಹೊಂದಿರದೆ ನಡೆಸುವ ಪ್ರತಿಯೊಂದು ಲೇವಾದೇವಿ ವ್ಯವಹಾರವು ಅಕ್ರಮ, ಅನಧಿಕೃತ ಹಾಗೂ ಕಾನೂನು ಬಾಹಿರ ವ್ಯವಹಾರವಾಗಿದ್ದು ಇಂತಹ ವ್ಯವಹಾರದಲ್ಲಿ ನಿರತರಾದ ವ್ಯಕ್ತಿಗಳು ಶಿಕ್ಷಾರ್ಹ ಅಪರಾಧ ನಡೆಸಿದಂತಾಗುತ್ತದೆ. ಈ ರೀತಿಯಾಗಿ ಸರಕಾರದಿಂದ ಲೈಸೆನ್ಸನ್ನು ಪಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ಹೆಸರು, ವಿಳಾಸ, ಕಾರ್ಯನಿರ್ವಹಣೆ ನಡೆಸುವ ನಿರ್ದೇಶಕರ, ಮ್ಯಾನೇಜರ್‌ನ ಮತ್ತು ಇತರ ಪ್ರಧಾನ ಅಧಿಕಾರಿಯ ಹೆಸರು ಮತ್ತು ವಿಳಾಸವನ್ನು ಹಾಗೂ ಲೇವಾದೇವಿ ವ್ಯವಹಾರ ನಡೆಸುವ ಪ್ರದೇಶಗಳ ಮತ್ತು ಪ್ರಧಾನ ಸ್ಥಳದ ವಿವರವನ್ನು ಹಾಗೂ ಲೇವಾದೇವಿ ವ್ಯವಹಾರದಲ್ಲಿ ತೊಡಗಿಸಲು ಉದ್ದೇಶಿಸಿರುವ ಬಂಡವಾಳದ ಒಟ್ಟು ಮೊಬಲಗು ಇತ್ಯಾದಿಗಳ ವಿವರಗಳನ್ನು ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ.

ಲೇವಾದೇವಿ ವ್ಯವಹಾರವನ್ನು ನಡೆಸುವ ಸಂದರ್ಭದಲ್ಲಿ ನೀಡುವ ಸಾಲದ ಮೇಲಿನ ಗರಿಷ್ಠ ಬಡ್ಡಿ ದರವನ್ನು ರಾಜ್ಯ ಸರಕಾರವು ಕಾಲಕಾಲಕ್ಕೆ ಅಧಿಸೂಚನೆಯನ್ನು ಹೊರಡಿಸುವ ಮೂಲಕ ನಿಗದಿಪಡಿಸಬೇಕಾಗಿದ್ದು ಒಂದು ವೇಳೆ ಈ ರೀತಿಯಾಗಿ ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ದರದ ಬಡ್ಡಿಯನ್ನು ವಸೂಲು ಮಾಡಿದಲ್ಲಿ ಇಂತಹ ಕ್ರಮವು ಕಾನೂನುಬಾಹಿರವಾಗುತ್ತದೆ. ಸರಕಾರದಿಂದ ಲೇವಾದೇವಿ ಲೈಸೆನ್ಸ್‌ನ್ನು ಹೊಂದಿರುವ ಪ್ರತಿಯೊಬ್ಬ ಲೇವಾದೇವಿದಾರನು ತನ್ನ ಅಂಗಡಿ ಅಥವಾ ವ್ಯವಹಾರದ ಸ್ಥಳದ ಮುಂದೆ ‘ಲೇವಾದೇವಿದಾರ’ ಎಂಬ ಪದವನ್ನು ತನ್ನ ಹೆಸರಿನೊಂದಿಗೆ ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಯಾರೇ ಲೇವಾದೇವಿದಾರನು ಅಥವಾ ಲೇವಾದೇವಿ ಸಂಸ್ಥೆಯು ಸಾಲವನ್ನು ನೀಡುವ ಸಂದರ್ಭದಲ್ಲಿ ಸಾಲಗಾರರಿಂದ ಬರೆಸಿಕೊಳ್ಳುವ ಯಾವುದೇ ದಾಖಲೆ ಅಂದರೆ ಪ್ರಾಮಿಸರಿ ನೋಟ್, ಸ್ವೀಕೃತಿ ಪತ್ರ, ಎಗ್ರಿಮೆಂಟ್ ಚೆಕ್ ಇತ್ಯಾದಿ ಎಲ್ಲಾ ದಾಖಲೆಗಳಲ್ಲಿ ಸರಿಯಾಗಿ ಮತ್ತು ಸಂಪೂರ್ಣವಾಗಿ ವಿವರಗಳನ್ನು ಭರ್ತಿ ಮಾಡಿದ ನಂತರವೇ ಸಾಲಗಾರರ ಅಥವಾ ಜಾಮೀನುದಾರರ ಸಹಿಯನ್ನು ಪಡೆಯಬೇಕಾಗುತ್ತದೆ. ಸಾಲ ನೀಡಿದ ನಂತರ ಲೇವಾದೇವಿದಾರರು ಸಾಲದ ವಸೂಲಿಗಾಗಿ ಸಾಲಗಾರರಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ಉಪದ್ರವ, ಬೆದರಿಕೆ, ಹಿಂಸೆ ಅಥವಾ ಕಿರುಕುಳ ನೀಡಿದ ಸಂದರ್ಭದಲ್ಲಿ ಸಾಲ ನೀಡಿದ ಲೇವಾದೇವಿದಾರ ಮತ್ತು ಆತನಿಗೆ ಬೆಂಬಲ ಅಥವಾ ಪ್ರಚೋದನೆ ನೀಡಿದ ವ್ಯಕ್ತಿಗಳು ಕಾನೂನಿನ ಉಲ್ಲಂಘನೆಯ ಮೂಲಕ ಶಿಕ್ಷಾರ್ಹ ಅಪರಾಧ ನಡೆಸಿದಂತಾಗಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕರ್ನಾಟಕ ಲೇವಾದೇವಿದಾರರ ನಿಯಮ 1965ರ ಪ್ರಕಾರ ಪ್ರತಿಯೊಬ್ಬ ಸಹಾಯಕ ರಿಜಿಸ್ಟಾರ್ ತನ್ನ ಅಧಿಕಾರ ವ್ಯಾಪ್ತಿಯ ಪ್ರದೇಶದ ಒಳಗಿನ ಲೈಸೆನ್ಸ್ ಹೊಂದಿರುವ ಲೇವಾದೇವಿದಾರರ ಪಟ್ಟಿಯನ್ನು ತನ್ನ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕಾಗುತ್ತದೆ.



























































































error: Content is protected !!
Scroll to Top