ಭಾವೈಕ್ಯದ ಸಂದೇಶ ಸಾರುವ ಸಲುವಾಗಿ ಯಾತ್ರೆ
ಉಡುಪಿ : ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ಮಂದಿರದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಬೆಳಗಾವಿಯ ಸವದತ್ತಿ ಮೂಲದ ವೃದ್ಧರೊಬ್ಬರು ವೀಲ್ಚೇರ್ನಲ್ಲಿ ಪ್ರಯಾಣಿಸುತ್ತಿದ್ದಾರೆ.
ಲೋಕಶಾಂತಿ ಮತ್ತು ಭಾವೈಕ್ಯದ ಸಂದೇಶ ಸಾರುವ ಸಲುವಾಗಿ ವ್ಹೀಲ್ಚೇರ್ನಲ್ಲಿಯೇ ಅಯೋಧ್ಯೆಗೆ ಹೋಗುತ್ತಿದ್ದಾರೆ 60 ವರ್ಷದ ಮಂಜುನಾಥ್. 2021ರಲ್ಲಿ ಉತ್ತರಾಖಂಡದಿಂದ ಅವರ ಯಾತ್ರೆ ಆರಂಭವಾಗಿದ್ದು, ಸೋಮವಾರ ಉಡುಪಿಗೆ ಆಗಮಿಸಿದ್ದರು.
ಈಗಾಗಲೇ ತಿರುಪತಿ, ರಾಮೇಶ್ವರ, ಕನ್ಯಾಕುಮಾರಿ, ಕೂಡಲ ಸಂಗಮ, ಚನ್ನಬಸವೇಶ್ವರ, ಮಹಾಲಕ್ಷ್ಮೀ ಕೋಲಾಪುರ, ಪಂಡರೀಪುರ, ಧರ್ಮಸ್ಥಳ ಮತ್ತು ಇನ್ನಿತರ ಹಲವು ದೇವಸ್ಥಾನಗಳನ್ನು ದರ್ಶನ ಮಾಡಿರುವ ಅವರು ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದಾರೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪ್ರಯಾಣ ಆರಂಭಿಸುವ ಅವರು ಕತ್ತಲಾಗುವವರೆಗೂ ಆದಷ್ಟು ದೂರ ಕ್ರಮಿಸುತ್ತಾರೆ. ರಾತ್ರಿ ವೇಳೆ ದೇವಸ್ಥಾನ ಅಥವಾ ಇನ್ನಿತರ ಕಡೆಗಳಲ್ಲಿ ನಿಂತು ಮರುದಿನ ಮತ್ತೆ ಪ್ರಯಾಣ ಮುಂದುವರಿಸುತ್ತಾರೆ.
ಈ ಹಿಂದೆಯೂ ಇವರು ಎರಡು ಬಾರಿ ಸೈಕಲ್ನಲ್ಲಿ ಇಂತಹದೇ ಯಾತ್ರೆ ಕೈಗೊಂಡಿದ್ದರು. ಆದರೆ ಆ ಬಳಿಕ ಅಪಘಾತವಾಗಿ ಒಂದು ಕಾಲಿನ ಬಲ ಕಳೆದುಕೊಂಡಿದ್ದು ನಡೆಯಲಾಗದ ಸ್ಥಿತಿಯಲ್ಲಿ ಅವರಿದ್ದಾರೆ. ಆದರೂ ಛಲಬಿಡದೆ ಮುನ್ನಡೆಯುತ್ತಿದ್ದಾರೆ. ಅಯೋಧ್ಯೆ ಉದ್ಘಾಟನೆಗೂ ಮುನ್ನ ತಲುಪುವ ಬಗ್ಗೆ ಅವರಿಗೆ ನಿಖರತೆ ಇಲ್ಲದಿದ್ದರೂ ಒಂದು ದಿನ ಅಲ್ಲಿಗೆ ತೆರಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
































