ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ವತಿಯಿಂದ ಸಾಹಿತಿ ದಿವಂಗತ ಯಶವಂತಿ ಸುವರ್ಣ ಅವರ ಸಂಸ್ಮರಣೆ ಮತ್ತು ಕೃತಿ ವಿಮರ್ಶೆ ಕಾರ್ಯಕ್ರಮ ಇತ್ತೀಚೆಗೆ ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಲೋಚನಾ ತಿಲಕ್, ಯಶವಂತಿ ಸುವರ್ಣ ಅವರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು ತಮ್ಮ ಸ್ತ್ರಿಪರ ಚಿಂತನೆಯಿಂದ ಜನಪ್ರಿಯರಾಗಿದ್ದರು ಎಂದರು.
ಅವರ ದಾರಿ ಕಥಾ ಸಂಕಲನವನ್ನು ವಿವರ್ಶಿಸಿದ ಶ್ಯಾಮಲಾ ಕುಮಾರಿ ಬೇವಿಂಜೆ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯಶವಂತಿಯವರಂತಹ ಹೆಣ್ಣು ಮಗಳು ಸಮಾಜದ ಓರೆ ಕೋರೆಗಳು ರಾಜಕೀಯ ತಂತ್ರಗಳು, ಅಧಿಕಾರಶಾಹಿ, ಕಾಮ ಪ್ರೇಮಗಳ ಕುರಿತು ದಿಟ್ಟವಾಗಿ ತೆರೆದುಕೊಳ್ಳುವುದು ಅಚ್ಚರಿ ಮೂಡಿಸಿತು ಎಂದರು. ಅವರ ತುಳು ಕೃತಿಗಳ ಬಗ್ಗೆ ಮಾತನಾಡಿದ ಡಾ. ಸುಮತಿ ಪಿ., ತುಳುನಾಡಿನ ಪರಂಪರೆ ಮತ್ತು ದೈವಗಳ ಕುರಿತು ಅಧ್ಯಯನಕ್ಕೆ ಯೋಗ್ಯವಾದ ಕೃತಿಗಳ ರಚನೆಯನ್ನು ಯಶವಂತಿ ಅವರು ಮಾಡಿದ್ದಾರೆ ಎಂದರು. ಅವರ ಆತ್ಮಕತೆ ಪಶ್ಚಿಮಕ್ಕೆ ವಾಲಿದ ಸೂರ್ಯದ ಕುರಿತು ಮಾತನಾಡಿದ ಸಾವಿತ್ರಿ ಮನೋಹರ್, ಲೇಖಕಿ ತನ್ನ ಜೀವನವನ್ನು ಎದುರಿಸಿದ ರೀತಿ, ಅವರ ಜೀವನಾನುಭೂತಿ, ಪ್ರಕೃತಿಯೊಂದಿಗಿನ ಒಡನಾಟ ಮುಂತಾದ ವಿಚಾರಗಳ ಕುರಿತು ಬೆಳಕು ಚೆಲ್ಲಿದರು. ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆಯವರು ಮಾತನಾಡಿ, ಯಶವಂತಿ ಸುವರ್ಣರ ಎಲ್ಲಾ ಕೃತಿಗಳು 60ರ ದಶಕದಲ್ಲಿ ಸ್ತ್ರೀ ಸಂವೇದನೆಗೆ ಹಿಡಿದ ಕೈಕನ್ನಡಿಯಂತಿದೆ ಎಂದರು.
ಗಾಯತ್ರಿ ವಿಜಯೇಂದ್ರ ಸ್ವಾಗತಿಸಿ, ಕಾರ್ಯದರ್ಶಿ ಮಾಲತಿ ಜಿ. ಪೈ ಕಾರ್ಯಕ್ರಮ ನಿರೂಪಿಸಿದರು. ಶೈಲಜ ಹೆಗ್ಡೆ ವಂದಿಸಿದರು.