ಆಂಧ್ರದ ಮಾಜಿ ಮುಖ್ಯಮಂತ್ರಿ ಕಿರಣ್‌ ರೆಡ್ಡಿ ಬಿಜೆಪಿ ಸೇರ್ಪಡೆ

ಕಾಂಗ್ರೆಸ್‌ಗೆ ಇನ್ನೊಂದು ಆಘಾತ

ಹೊಸದಿಲ್ಲಿ : ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಒಂದು ಸಾಲಿನ ರಾಜೀನಾಮೆ ಪತ್ರ ಸಲ್ಲಿಸಿದ ಕೆಲವು ವಾರಗಳ ನಂತರ ರೆಡ್ಡಿ ಬಿಜೆಪಿ ಬಾಗಿಲು ತಟ್ಟಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಕಿರಣ್ ಕುಮಾರ್ ರೆಡ್ಡಿ ಅವರಿಗೆ ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಸೇರ್ಪಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಣ್ ಕುಮಾರ್ ರೆಡ್ಡಿ, ಕಾಂಗ್ರೆಸ್ ಬಿಡುತ್ತೇನೆ ಎಂದು ಊಹಿಸಿರಲಿಲ್ಲ. ಆದರೆ, ಅಲ್ಲಿ ಸಂವಾದದ ಕೊರತೆಯಿದೆ. ಯಾರ ಸಲಹೆಗಳನ್ನು ತೆಗೆದುಕೊಳ್ಳಲ್ಲ, ಬಿಜೆಪಿಗೆ ಸಮಾಜದ ಪ್ರತಿಯೊಂದು ವರ್ಗದ ಬಗ್ಗೆ ಸ್ಪಷ್ಟ ದೂರದೃಷ್ಟಿಯಿದೆ. ಆ ಪಕ್ಷದಲ್ಲಿನ ಯಶಸ್ಸಿನ ಹಸಿವು ನನಗೆ ಸ್ಫೂರ್ತಿಯಾಗಿದೆ ಎಂದರು.
2014ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ಸೃಷ್ಟಿಸುವ ಅಂದಿನ ಯುಪಿಎ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕಿರಣ್ ಕುಮಾರ್ ‘ಜೈ ಸಮೈಕ್ಯಾಂಧ್ರ’ ಎಂಬ ಸ್ವಂತ ಪಕ್ಷವನ್ನು ಸ್ಥಾಪಿಸಿ, ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದಾಗ್ಯೂ, ಯಾವುದೇ ಲಾಭವಿಲ್ಲದೆ ದೀರ್ಘಕಾಲ ರಾಜಕೀಯದಿಂದ ದೂರ ಉಳಿದಿದ್ದ ಕಿರಣ್ ಕುಮಾರ್ 2018ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದರು.
ನಿನ್ನೆಯಷ್ಟೇ ಹಿರಿಯ ನಾಯಕ ಮಾಜಿ ರಕ್ಷಣಾ ಸಚಿವ ಎ.ಕೆ.ಆಯಂಟನಿಯವರ ಪುತ್ರ ಬಿಜೆಪಿ ಸೇರಿದ್ದರು. ಇದೀಗ ಇಂದು ಕಿರಣ್‌ ರೆಡ್ಡಿ ಪಕ್ಷ ಬಿಡುವುದರೊಂದಿಗೆ ಕಾಂಗ್ರೆಸ್‌ ಬೆನ್ನು ಬೆನ್ನಿಗೆ ಆಘಾತ ಅನುಭವಿಸಿದೆ.



































































































error: Content is protected !!
Scroll to Top