ಕಂಬಳ ಕ್ಷೇತ್ರದ ಸಾಧಕ, ಮಾದರಿ ಕೃಷಿಕ ಗುಣಪಾಲ್ ಕಡಂಬ ಅವರ ಕೃಷಿ ಕಾರ್ಯಕ್ಕೆ ಮೆಚ್ಚುಗೆಕಾರ್ಕಳ : ಅಡಿಕೆ ಸೇರಿದಂತೆ ಇತರೆ ಕೃಷಿ ಬೆಳೆಗಳನ್ನು ಮಳೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಹಾಟ್ ಛೇಂಬರ್ ಸಂಶೋಧಿಸಿರುವ ಶಿರ್ಲಾಲು ಗ್ರಾಮದ ಗುಣಪಾಲ್ ಕಡಂಬ ಅವರ ತೋಟಕ್ಕೆ ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ ಅವರು ತಮ್ಮ ತಂಡದೊಂದಿಗೆ ನ. 30ರಂದು ಭೇಟಿ ನೀಡಿದರು.
ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಕಂಗಾಲಾಗಿದ್ದ ಕೃಷಿಕರು ಹಾಟ್ ಛೇಂಬರ್ ನಿರ್ಮಿಸುವ ಮೂಲಕ ತಮ್ಮ ಬೆಳೆಯನ್ನು ಪ್ರಮುಖವಾಗಿ ಅಡಿಕೆಯನ್ನು ಒಣಗಿಸಬಹುದೆಂದು ತೋರಿಸಿಕೊಟ್ಟ ಗುಣಪಾಲ್ ಕಡಂಬರ ಕಾರ್ಯ ಕೃಷಿಕರ ಪಾಲಿಗೆ ವರದಾನವೆಂದು ಕೆಂಪೇ ಗೌಡ ಅಭಿಪ್ರಾಯಪಟ್ಟರು. ಗುಣಪಾಲ್ ಕಡಂಬರು ನಿರ್ಮಿಸಿದ ಹಾಟ್ ಛೇಂಬರ್ ಕುರಿತು ನ್ಯೂಸ್ ಕಾರ್ಕಳ ನ. 29ರಂದು ವರದಿ ಪ್ರಸಾರ ಮಾಡಿತ್ತು. ವರದಿ ನೋಡಿ ಜಂಟಿ ಕೃಷಿ ನಿರ್ದೇಶಕರು ಶಿರ್ಲಾಲು ಭೇಟಿ ನೀಡಿರುತ್ತಾರೆ.
ಗುಣಪಾಲ್ ಕಡಂಬರ ಕುರಿತು
ಕಂಬಳ ಅಕಾಡಮಿ ಸಂಚಾಲಕ- ಪ್ರಧಾನ ತೀರ್ಪುಗಾರ, ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಗತಿಪರ ಕೃಷಿಕ-ಸಂಶೋಧಕ ಗುಣಪಾಲ್ ಕಡಂಬ ಅವರು ಶಿರ್ಲಾಲು ಗ್ರಾಮದಲ್ಲಿ ಸುಮಾರು 40 ಎಕ್ರೆ ಜಾಗದಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅಡಿಕೆ, ತೆಂಗು, ರಬ್ಬರ್ ಮೊದಲಾದ ಪ್ರಧಾನ ಬೆಳೆಯೊಂದಿಗೆ ಜಾಯಿಕಾಯಿ, ಪಪ್ಪಾಯಿ, ಕರಿಮೆಣಸು, ರಂಜುಟಾನ್ ಉಪಬೆಳೆ, ತೇಗ ಮರಗಳ ರಕ್ಷಣೆ ಮಾಡುತ್ತಿದ್ದಾರೆ. ಇವರ ಕೃಷಿಯನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಕೃಷಿಕರು ಆಗಮಿಸುತ್ತಾರೆ.

ಮೂಡಬಿದ್ರೆಯ ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ 27 ವರ್ಷ ಉಪನ್ಯಾಸಕರಾಗಿ, 5 ವರ್ಷ ಪ್ರಾಂಶುಪಾಲರಾಗಿ 2005ರಲ್ಲಿ ನಿವೃತ್ತಿ ಹೊಂದಿದ ಬಳಿಕ ತಮ್ಮ ಪೂರ್ಣ ಸಮಯವನ್ನು ಕೃಷಿ, ಕಂಬಳ, ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.
ಅರಸಿ ಬಂದ ಪ್ರಶಸ್ತಿ
ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಕಡಂಬರು 1994ರಲ್ಲಿ ಕಂಬಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಜ್ಯದ ದಸರಾ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 2017ರಲ್ಲಿ ಕಂಬಳ ಅಕಾಡಮಿ ಸಾಧನೆಗಾಗಿ ಕರ್ನಾಟಕ ರಾಜ್ಯ ಕ್ರೀಡಾ ಷೋಷಕ ಪ್ರಶಸ್ತಿ ಮುಡಿಗೇರಿಸಿಕೊಂಡಿರುತ್ತಾರೆ. 1998ರಲ್ಲಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಗ್ರಾಮೀಣ ಕ್ರೀಡೆ ಕರ್ನಾಟಕ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ನೀಡುವ ರಾಜ್ಯ ಮಟ್ಟದ ಪರಿಶೀಲನಾ ಮತ್ತು ಆಯ್ಕೆ ಸಮಿತಿಯ 4 ಅವಧಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ನೀರಾವರಿ ಅನ್ವೇಷಣೆ, ಕೃಷಿ ಕ್ಷೇತ್ರದ ಸಾಧನೆಗಾಗಿ ರಾಜ್ಯ ಕೃಷಿ ವಿಜ್ಞಾನ ಪರಿಷತ್ನಿಂದ ಪ್ರಶಸ್ತಿ ಪಡೆದಿರುವ ಇವರನ್ನು ಹತ್ತಾರು ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ತಮ್ಮ ನೇರ ಮಾತು, ಲವಲವಿಕೆ, ಉತ್ಸಾಹದ ಚಿಲುಮೆಯಂತಿರುವ ಗುಣಪಾಲ್ ಕಡಂಬ ಅವರು ಓರ್ವ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಗುಣಪಾಲ್ ಕಡಂಬ ಅವರ ಸಂಪರ್ಕ ಸಂಖ್ಯೆ : 8197331272









































