ದಿಲ್ಲಿ, ನ.19: ಪಂಜಾಬ್ & ಮಹಾರಾಷ್ಟ್ರ ಸಹಕಾರಿ ಬ್ಯಾಂಕ್, ಐಎಲ್ & ಎಫ್ಎಸ್ ಬಳಿಕ ಇದೀಗ ಇನ್ನೊಂದು ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡು ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಆರ್ಬಿಐ 30 ದಿನಗಳ ಮಟ್ಟಿಗೆ ಬ್ಯಾಂಕಿನ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ (ಮೊರೊಟೋರಿಯಂ).
ಚೆನ್ನೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ 563 ಶಾಖೆಗಳನ್ನು ಹೊಂದಿದೆ ಮತ್ತು ಗ್ರಾಹಕರ 20,973 ಕೋ.ರೂ. ಠೇವಣಿ ಬ್ಯಾಂಕಿನಲ್ಲಿದೆ.ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ನಿರಂತರ ನಷ್ಟ ಅನುಭವಿಸುತ್ತದೆ. ಇದರ ಪರಿಣಾಮವಾಗಿ ಬ್ಯಾಂಕಿನ ನೆಟ್ ವರ್ತ್ ಕುಸಿದಿದೆ. ಸಾಕಷ್ಟು ಬಂಡವಾಳ ಸಂಗ್ರಹಿಸಲು ಬ್ಯಾಂಕಿನಿಂದ ಸಾಧ್ಯವಾಗುತ್ತಿಲ್ಲ. ಗ್ರಾಹಕರು ನಿರಂತರವಾಗಿ ಠೇವಣಿ ಹಿಂಪಡೆಯುತ್ತಿರುವ ಕಾರಣ ಬ್ಯಾಂಕ್ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಆಡಳಿತ ಮಂಡಳಿಯಲ್ಲಿ ಕಾಣಿಸಿಕೊಂಡಿರುವ ತೀವ್ರ ಸಮಸ್ಯೆಗಳೇ ಬ್ಯಾಂಕಿನ ಅವನತಿಗೆ ಕಾರಣ ಎನ್ನಲಾಗುತ್ತಿದೆ. ಸೆಪ್ಟೆಂಬರ್ ಗೆ ಅಂತ್ಯವಾದ ಈ ಸಾಲಿನ ತ್ರೈಮಾಸಿಕವೊಂದರಲ್ಲೇ ಬ್ಯಾಂಕ್ 397 ಕೋ. ರೂ. ನಷ್ಟ ಅನುಭವಿಸಿದೆ. ವಸೂಲಾಗದ ಸಾಲ (NPA) ಶೇ.25.4ರಷ್ಟಿದೆ.
ಈ ಹಿನ್ನೆಲೆಯಲ್ಲಿ ಆರ್ ಬಿಐ ಸದ್ಯ ಗರಿಷ್ಠ 25,000 ರೂ. ಮಾತ್ರ ಹಿಂಪಡೆಯಲು ಠೇವಣಿದಾರರಿಗೆ ಅವಕಾಶ ನೀಡಿದೆ. ಠೇವಣಿದಾರರ ಹಣ ಮತ್ತು ಅದರ ಬಡ್ಡಿ ಸುರಕ್ಷಿತ ಎಂದು ಆರ್ಬಿಐ ಭರವಸೆ ನೀಡಿದ್ದರೂ ಜನರು ಮಾತ್ರ ಗಾಬರಿಯಾಗಿ ಬ್ಯಾಂಕಿಗೆ ಎಡತಾಕುತ್ತಿದ್ದಾರೆ.
ಈ ನಡುವೆ ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್ ನೊಂದಿಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಟನ್ನು ವಿಲೀನಗೊಳಿಸುವ ಮಾತುಕತೆ ನಡೆಯುತ್ತಿದೆ. ಆರ್ ಬಿ ಐ ಹೇಳಿರುವ ಎಲ್ಲಾ ಷರತ್ತುಗಳನ್ನ ಮೂವತ್ತು ದಿನದಲ್ಲಿ ಪೂರೈಸುವ ಹೊಣೆಗಾರಿಕೆ ಈಗ ಡಿಬಿಎಸ್ ಬ್ಯಾಂಕಿನ ಮೇಲಿದೆ.