ಆಗಸ್ಟ್ 6 – 13 : ತುಳು ಅಕಾಡೆಮಿ ಚಾವಡಿಯಲ್ಲಿ  ತುಳು ಪ್ರವಚನ ಸಪ್ತಾಹ

ಏಳದೆ ಮಂದಾರ ರಾಮಾಯಣ – ಸುಗಿಪು – ದುನಿಪು

ಮಂಗಳೂರು, ಆ. 3 : ತುಳು ವಾಲ್ಮೀಕಿ ಎಂದೇ ಹೆಸರು ಪಡೆದ ದಿ. ಮಂದಾರ ಕೇಶವ ಭಟ್ ಅವರು ಬರೆದ ‘ಮಂದಾರ ರಾಮಾಯಣ’ ನಮ್ಮ ನೆಲದ ಮಹಾಕಾವ್ಯಗಳಲ್ಲಿ ಒಂದು. ಇದನ್ನು ನಾಡಿನಾದ್ಯಂತ  ಪಸರಿಸಬೇಕು ಎಂಬ ಧ್ಯೇಯದಿಂದ ಕಳೆದ ಬಾರಿ ಅವರ ನೂರ ಒಂದನೇ ಜನ್ಮದಿನಾಚರಣೆ ಸಂದರ್ಭ ತುಳುವೆರೆ ಚಾವಡಿ ಶಕ್ತಿನಗರದಲ್ಲಿ ‘ಏಳದೆ ಮಂದಾರ ರಾಮಾಯಣ – ಸುಗಿಪು ದುನಿಪು’ ಎಂಬ ಏಳು ದಿನಗಳ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಪ್ರದಾಯವನ್ನು ಮುಂದುವರಿಸುವ ಉದ್ದೇಶದಿಂದ  ಆ. 6 ರಿಂದ 13 ರವರೆಗೆ ‘ಏಳದೆ ಮಂದಾರ ರಾಮಾಯಣ: ಸುಗಿಪು – ದುನಿಪು’ ತುಳು ಪ್ರವಚನ ಸಪ್ತಾಹವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಸಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುವರ್ಲ್ಡ್ (ರಿ.) ಮಂಗಳೂರು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಉದ್ಘಾಟನೆ  ಆ. 6 ರಂದು ಅಪರಾಹ್ನ 3 ಗಂಟೆಗೆ ಜರಗಲಿದೆ. ಮೂಡಬಿದಿರೆ ಜೈನ ಮಠದ ಡಾ .ಸ್ವಸ್ತಿ ಶ್ರೀ  ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ  ಮಹಾ ಸ್ವಾಮೀಜಿ ದೀಪೋಜ್ವಲನೆಯ ಮೂಲಕ ನಾಂದಿ ಕಾರ್ಯಕ್ರಮವನ್ನು ನೆರವೇರಿಸುವರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂದಾರ ರಾಮಾಯಣ ಗ್ರಂಥ ಅನಾವರಣ ಮಾಡಿ ಏಳು ದಿನಗಳ ವಾಚನ –  ಪ್ರವಚನಗಳಿಗೆ ವಿದ್ಯುಕ್ತ ಚಾಲನೆ ನೀಡುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸುವರು. ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳು ಕಾವ್ಯಯಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗ್ರಂಥಕರ್ತ ಮಂದಾರ ಕೇಶವ ಭಟ್ಟರ ಸಂಸ್ಮರಣೆ ಮಾಡುವರು.ಇದೇ ಸಂದರ್ಭದಲ್ಲಿ ಮಂದಾರ ರಾಜೇಶ್ ಭಟ್ ಅವರನ್ನು ಮಂದಾರ ಸಮ್ಮಾನ್ ನೀಡಿ ಗೌರವಿಸಲಾಗುವುದು.

ಏಳದೆ : ಸಪ್ತಾಹ ವಿಶೇಷ

ಆ. 6ರಂದು  : ‘ಇರೆತ್ತ ಪುರೆ – ಪರಬುನ ವರಸಾರಿ’

ಆ. 7 ರಂದು  ‘ದಗೆ ತೋಜಾದ್ ಪಗೆ ಸಾದ್ಯಳ್’

ಆ. 8ರಂದು  ‘ಬೊಳ್ಪುದ ಗುಡ್ಚಿಲ್’

ಆ.10 ರಂದು ‘ಪುಗೆ ತೂಪಿ ಪಗೆ’

ಆ. 11ರಂದು ‘ಮಿತ್ತ ಲೋಕೊದ ಬಿತ್ತ್’ ಮತ್ತು ಬೆಂದಿನೆನ್ ತಿಂದೆ’

ಆ. 12 ರಂದು ‘ಪಚ್ಚೆದುಂಗಿಲ’

ಆ.13 ರಂದು ‘ನೀಲದುಂಗಿಲ’

ಡಾ.ಮೋಹನ ಆಳ್ವರಿಗೆ ಮಂದಾರ ಭಾಷಾ ಸಮ್ಮಾನ್

ಮಂದಾರ ರಾಮಾಯಣ ಸಪ್ತಾಹ ಸಮಾರೋಪ ಸಮಾರಂಭ ಅಕಾಡೆಮಿ ಚಾವಡಿಯಲ್ಲಿ ಆ.13 ರಂದು ಜರಗಲಿದ್ದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಚಾರ್ಯ ಹಾಗೂ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ ಸಮಾರೋಪ ಭಾಷಣ ಮಾಡುವರು.

ಆಳ್ವಾಸ್ ನುಡಿಸಿರಿ – ವಿರಾಸತ್ ರೂವಾರಿ ಮೂಡಬಿದಿರೆಯ ಡಾ.ಎಂ.ಮೋಹನ ಆಳ್ವ ಅವರಿಗೆ ‘ಮಂದಾರ ಸಿರಿ ಭಾಷಾ ಸಮ್ಮಾನ್’ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಕೊರೋನಾ ಜಾಗೃತಿಗಾಗಿ ಸರಕಾರದ ನಿಯಮಾನುಸಾರ ಕಲಾವಿದರು ಮತ್ತು ಅತಿಥಿಗಳಿಗೆ ಮಾತ್ರ ಸೀಮಿತವಾಗಿ ನಡೆಯುವ ಈ ಸಪ್ತಾಹ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲಾಗುವುದು.















































\















error: Content is protected !!
Scroll to Top