ಹಿಂದೂ ಸಂಘಟನೆಗೆ ಹೆದರಬೇಕಿಲ್ಲ- ಪ್ರೇಮಿಗಳ ರಕ್ಷಣೆಗೆ ನಾವು ಪ್ರೀತಿಯ ಸೈನಿಕರಾಗಿ ನಿಲ್ಲಲಿದ್ದೇವೆ ಎಂದ ಯುವ ಕಾಂಗ್ರೆಸ್

ಬೆಂಗಳೂರು : ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಸನ್ನದ್ಧವಾಗಿದೆ. ವಿಶ್ವ ಹಿಂದೂ ಪರಿಷತ್‌, ಭಜರಂಗ ದಳದಂತಹ ಸಂಘಟನೆಗಳ ಪುಂಡಾಟಿಕೆಗೆ ಹೆದರಬೇಕಿಲ್ಲ, ಪ್ರೇಮಿಗಳ ರಕ್ಷಣೆಗೆ ನಾವು ‘ಪ್ರೀತಿಯ ಸೈನಿಕರಾಗಿ’ ನಿಲ್ಲಲಿದ್ದೇವೆ ಎಂದು ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಎಚ್.ಎಸ್‌. ಮಂಜುನಾಥ್‌ ಗೌಡ ಘೋಷಿಸಿದ್ದಾರೆ.

ಪ್ರತಿ ವರ್ಷ ಪ್ರೇಮಿಗಳ ದಿನದಂದು ಹಿಂದೂ ಪರ ಸಂಘಟನೆಗಳು ಪಾರ್ಕ್‌ಗಳು, ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡುವ ದೂರುಗಳು ಕೇಳಿಬರುತ್ತವೆ. ಈ ಬಾರಿ ಅಂತಹ ಯಾವುದೇ ಸಮಾಜಘಾತುಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಗೌಡ ಎಚ್ಚರಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ಪ್ರೇಮಿಗಳ ಸುರಕ್ಷತೆಯ ಹೊಣೆ ನಿರ್ವಹಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಸಂಗಾತಿಯ ಆಯ್ಕೆ ಮತ್ತು ಪ್ರೀತಿ ಮಾಡುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಾಗಿ, ಕಾನೂನುಬಾಹಿರವಾಗಿ ಪ್ರೇಮಿಗಳ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನು ನಾವು ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇರುವುದರಿಂದ, ಅಲ್ಲಿ ಹೆಚ್ಚಿನ ನಿಗಾ ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಹೂವು ಮತ್ತು ಉಡುಗೊರೆ ಮಾರಾಟ ಮಾಡುವ ಬಡ ವ್ಯಾಪಾರಿಗಳ ಮೇಲಿನ ದಾಳಿಗಳನ್ನು ತಡೆಯಲು ಕೂಡ ಕಾರ್ಯಕರ್ತರು ಸಕ್ರಿಯರಾಗಿರಲಿದ್ದಾರೆ. ಪೊಲೀಸ್ ಇಲಾಖೆಯು ಇಂತಹ ಗೂಂಡಾಗಿರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಇಲಾಖೆ ವಿಫಲವಾದರೆ ನಾವೇ ಪ್ರೇಮಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.



































































































error: Content is protected !!
Scroll to Top