ರಾಯಚೂರು : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಗಸ್ಟ್ ತಿಂಗಳಿನ 19 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 2.81 ಕೋಟಿ ರೂ. ಕಾಣಿಕೆ ಹರಿದುಬಂದಿದೆ.
ಪ್ರತಿ ತಿಂಗಳಿನಂತೆ ಈ ಬಾರಿಯೂ ಭಕ್ತರ ದಂಡು ಮಠಕ್ಕೆ ಹರಿದು ಬಂದಿದ್ದು, ಕೇವಲ 19 ದಿನದಲ್ಲಿ ಒಟ್ಟು 2,81,69,135 ರೂ. ಕಾಣಿಕೆ ಸಂಗ್ರಹವಾಗಿದೆ.
ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2,73,34,635 ರೂ. ಕರೆನ್ಸಿ ನೋಟುಗಳು ಹಾಗೂ 8,34,500 ರೂ. ನಾಣ್ಯಗಳು ಹರಿದುಬಂದಿದೆ. ಜೊತೆಗೆ ಭಕ್ತರು 94 ಗ್ರಾಂ ಚಿನ್ನ, 515 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ನೀಡಿದ್ದಾರೆ.

ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು. ಆಗಸ್ಟ್ 27 ರಿಂದ 7 ದಿನಗಳ ಕಾಲ ರಾಯರ 355ನೇ ಆರಾಧನಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆ ಹುಂಡಿ ಎಣಿಕೆ ಕಾರ್ಯವನ್ನ ಮುಗಿಸಲಾಗಿದೆ.














