17ನೇ ರಾಜ್ಯ ಬಜೆಟ್ ಬೃಹತ್ ಶೂನ್ಯ : 11G ಮಾದರಿಯಲ್ಲ ಬದಲಾಗಿ 11 ಲೈ ಬಜೆಟ್

ಕಾರ್ಕಳ : ಹೊಸ ಹೊಸ ಪದಪುಂಜಗಳನ್ನು ಹೊಸೆಯುವುದಕ್ಕೆ ಸಿದ್ದರಾಮಯ್ಯನವರು ನೀಡಿದ ಆದ್ಯತೆಯನ್ನು ಹೊಸ ಹೊಸ ಯೋಜನೆಗಳ ಸೃಷ್ಟಿಗೆ ನೀಡದೇ ಇರುವುದು ರಾಜ್ಯದ ದೌರ್ಭಾಗ್ಯ. ಈ ಬಾರಿಯ ಬಜೆಟ್ ನ್ನು “11 G” ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯನವರು ಬಜೆಟ್‌ನ ಪೂರ್ವಪೀಠಿಕೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ. ಆದರೆ ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು “11G” ಬಜೆಟ್ ಬದಲಾಗಿದೆ “11 ಲೈ” (ಹನ್ನೊಂದು ಸುಳ್ಳು) ಗಳ ಬಜೆಟ್ ಎಂದು ವಿಶ್ಲೇಷಿಸಬಹುದಾಗಿದೆ ಎಂದು ಶಾಸಕ ಸುನಿಲ್‌ 17ನೇ ರಾಜ್ಯ ಬಜೆಟ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಾಲದ ಹೊರೆ
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಸಾಲದ‌ ಹೊರೆಯನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ಹೊರಿಸಿದ್ದಾರೆ. ಬರೋಬ್ಬರಿ 1,32,000 ಕೋಟಿ ರೂ. ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ 8,24,389 ಕೋಟಿ ರೂ.ಗೆ ಏರಿಕೆಯಾಗಿರುವುದು ಕಳವಳದ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು 74,682 ಕೋಟಿ ರೂ. ಗೆ. ಇಳಿಕೆ ಮಾಡಲಾಗಿದೆ. ಯಾವ ದೃಷ್ಠಿಯಿಂದ ನೋಡಿದರೂ ಇದು ವಿತ್ತೀಯ ಶಿಸ್ತಿನ ಪರಿಮಿತಿಯೊಳಗಿರುವ ಆಯವ್ಯಯ ಎಂದು ಒಪ್ಪಿಕೊಳ್ಳುವುದಕ್ಕೆ ಅಸಾಧ್ಯವಾಗಿದ್ದು, ರಾಜ್ಯದ ದೂರಗಾಮಿ ಭವಿಷ್ಯದ ದೃಷ್ಟಿಯಿಂದ ಅವಲೋಕಿಸಿದರೆ ಸಿದ್ದರಾಮಯ್ಯನವರು ಕರ್ನಾಟಕವನ್ನು ತೀವ್ರತರವಾದ ಸಾಲದ ಮಡುವಿನಲ್ಲಿ ನೂಕುವ ರಭಸದಲ್ಲಿ ಇದ್ದಾರೆ ಎಂದು ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಕರಾವಳಿ ವಿರೋಧಿ ಬಜೆಟ್‌
ಬಜೆಟ್‌ನ ಪ್ರತಿಪುಟವನ್ನು ಹುಡುಕಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಒಂದೇ ಒಂದು ಅಂಶಗಳು ಈ ಬಜೆಟ್‌ನಲ್ಲಿ ಇಲ್ಲ. ಹೊಸ ವೈದ್ಯ ಕಾಲೇಜು ಬೇಡಿಕೆ ಈಡೇರಿಲ್ಲ.‌ ಪಶ್ಚಿಮ ವಾಹಿನಿ ಯೋಜನೆಗಳಿಗೆ ಬಿಡಿಕಾಸು ಕೊಟ್ಟಿಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರು ಬಿಟ್ಟು ಆಚೆ ಬರದೇ ಇರುವುದು ಈ ಸರ್ಕಾರದ ಬಿಯಾಂಡ್ ಬೆಂಗಳೂರು ಯೋಜನೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಕರಾವಳಿಯ ಸಮಗ್ರ ಅಭಿವೃದ್ಧಿ ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್, ಪ್ರವಾಸೋದ್ಯಮದ ಬಗ್ಗೆ ಸ್ಪಷ್ಟತೆ, ಐಟಿ ಹೂಡಿಕೆ ಇತ್ಯಾದಿ ವಿಚಾರಗಳನ್ನು ನಾವು ನಿರೀಕ್ಷೆ ಮಾಡಿದ್ದೆವು. ಹೀಗಾಗಿ ಇದು ಕರಾವಳಿ ವಿರೋಧಿ ಬಜೆಟ್ ಕೂಡಾ ಹೌದು. ಒಟ್ಟಾರೆಯಾಗಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಅಪ್ರೋಚ್ playing to the gallery ಎಂದು ಒಂದೇ ವಾಕ್ಯದಲ್ಲಿ ಬರೆಯಬಹುದು ಎಂದು ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.



















































































































error: Content is protected !!
Scroll to Top