ಪತ್ತೊಂಜಿಕಟ್ಟೆಯ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ
ಮಂಗಳೂರು: ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ ಸೆ.14ರಂದು ಕಾರ್ಕಳಕ್ಕೆ ಭೇಟಿ ನೀಡಲಿದ್ದಾರೆ. ವಿರಾಟ್ ಹಿಂದೂಸ್ಥಾನ್ ಸಂಗಮ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಡಾ.ಸ್ವಾಮಿ ಬೆಳಗ್ಗೆ 9 ಗಂಟೆಗೆ ಕಾರ್ಕಳದ ಪತ್ತೊಂಜಿಕಟ್ಟೆಯಲ್ಲಿರುವ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಾಲಯಕ್ಕೆ ಆಗಮಿಸಲಿದ್ದಾರೆ.
ಸೆ.13ರಂದು ಸಂಜೆ ದಿಲ್ಲಿಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೆ.14ರಂದು ಬೆಳಗ್ಗೆ 8 ಗಂಟೆಗೆ ರಸ್ತೆ ಮಾರ್ಗವಾಗಿ ಶೃಂಗೇರಿಗೆ ತೆರಳಲಿದ್ದು, ಈ ಸಂದರ್ಭದಲ್ಲಿ ಪತ್ತೊಂಜಿಕಟ್ಟೆ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.
ಸೆ. 14 ಮತ್ತು 15ರಂದು ಅವರ 85ನೇ ವರ್ಷದ ಜನ್ಮದಿನಾಚರಣೆ ಹಾಗೂ ವಿಎಚ್ಎಸ್ ಪ್ರತಿನಿಧಿಗಳ ಸಮಾವೇಶ ಶೃಂಗೇರಿಯ ಅಭಿನವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಡಾ.ಸ್ವಾಮಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಎರಡು ದಿನಗಳಲ್ಲಿ ಬೆಳಗ್ಗೆ ಡಾ. ಸ್ವಾಮಿ ಶೃಂಗೇರಿ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಸೆ.15 ರಂದು ಮಧ್ಯಾಹ್ನ 3 ಗಂಟೆಗೆ ಶೃಂಗೇರಿಯಿಂದ ನಿರ್ಗಮಿಸಲಿದ್ದು, ರಾತ್ರಿ 8 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದಿಲ್ಲಿಗೆ ತೆರಳಲಿದ್ದಾರೆ.








