ಕೊರೊನಾ ಸೋಂಕಿತರಿಗೆ ಸಿಗಲಿದೆ ಪೌಷ್ಠಿಕ ಆಹಾರ

ಬೆಂಗಳೂರು : ರಾಜ್ಯದಾದ್ಯಂತ ಇರುವ ಜಿಲ್ಲಾ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊವಿಡ್ ಕೇರ್ ಕೇಂದ್ರ ಹಾಗೂ ಕೊವಿಡ್ ಕೇರ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ ಹಾಗೂ ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ನೀಡಬೇಕು. ಪ್ರತಿ ವ್ಯಕ್ತಿಯ ಆಹಾರ ವೆಚ್ಚ 250 ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕು. ಪ್ರತಿ ನಿತ್ಯ ಆಹಾರ ವ್ಯವಸ್ಥೆಯನ್ನು ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಮತ್ತು ಇತರರಿಗೆ ಒದಗಿಸಬೇಕು. ಈ ಮೊತ್ತವನ್ನು ಎಆರ್‌ಎಸ್‌ ನಿಧಿ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶದಲ್ಲಿ ತಿಳಿಸಿದ್ದಾರೆ. ಕೊರೊನಾ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ನೀಡಲಾಗುತ್ತಿಲ್ಲ. ಸೂಕ್ತ ಆಹಾರವಿಲ್ಲದೆ ಕೊರೊನಾ ರೋಗಿಗಳು ನರಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಸರ್ಕಾರ ತಜ್ಞರ ಜೊತೆ ಚರ್ಚಿಸಿ ಪ್ರತಿ ದಿನ ಹಾಗೂ ಪ್ರತಿ ಹೊತ್ತಿನ ಊಟದ ಮೆನುವನ್ನು ಸಿದ್ಧಪಡಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಮೆನು ಪ್ರಕಾರ ರೋಗಿಗಳಿಗೆ ಊಟ, ಉಪಹಾರ ನೀಡಲು ತಿಳಿಸಿದೆ.

ಊಟದಲ್ಲಿ ಏನೇನಿರುತ್ತೆ?

ಪ್ರತಿ ದಿನ ಬೆಳಗ್ಗೆ 7ಕ್ಕೆ ಉಪಹಾರ, ಬೆಳಗ್ಗೆ 10ಕ್ಕೆ ಹಣ್ಣು, ಗಂಜಿ ಅಥವಾ ಸೂಪ್, ಮಧ್ಯಾಹ್ನ 1ಕ್ಕೆ ಊಟ ರೊಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು, ಮೊಟ್ಟೆ ನೀಡಲಾಗುತ್ತದೆ. ಸಂಜೆ 5.30ಕ್ಕೆ ಲಘು ಉಪಹಾರ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್-3, ಪ್ರೊಟೀನ್ ಬಿಸ್ಕೆಟ್-2, ಫ್ರೆಶ್ ಡೇಟ್ಸ್-2, ಮ್ಯಾಂಗೋ ಬಾರ್(ವಿಟಮಿನ್-ಸಿ ಯುಕ್ತ) ನೀಡಲಾಗುತ್ತದೆ. ರಾತ್ರಿ 7ಕ್ಕೆ ಊಟ ರೊಟ್ಟಿ ಅಥವಾ ಚಪಾತಿ-2, ಪಲ್ಯ, ಅನ್ನ, ಬೇಳೆ ಸಾರು, ಮೊಸರು ಹಾಗೂ ರಾತ್ರಿ 9ಕ್ಕೆ ಫ್ಲೇವರ್ಡ್ ಹಾಲು ನೀಡಲಾಗುತ್ತದೆ.

ಬೆಳಗಿನ ಉಪಹಾರ ಯಾವ ದಿನ ಏನು?

ಸೋಮವಾರ – ಬೆಳಗ್ಗೆ 7ಕ್ಕೆ ರವೆ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು, ರಾಗಿ ಗಂಜಿ

ಮಂಗಳವಾರ –  ಬೆಳಗ್ಗೆ 7ಕ್ಕೆ ಪೊಂಗಲ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ಪಾಲಾಕ್ ಸೂಪ್.

 ಬುಧವಾರ –  ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು, ರವೆ ಗಂಜಿ.

ಗುರುವಾರ – ಬೆಳಗ್ಗೆ 7ಕ್ಕೆ ಅಕ್ಕಿ ಇಡ್ಲಿ, ಬೆಳಗ್ಗೆ 10ಕ್ಕೆ ಕಲ್ಲಂಗಡಿ ಹಣ್ಣು, ಕ್ಯಾರೆಟ್ ಸೂಪ್.

ಶುಕ್ರವಾರ – ಬೆಳಗ್ಗೆ 7ಕ್ಕೆ ಬಿಸಿಬೇಳೆ ಬಾತ್, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ರಾಗಿ ಗಂಜಿ

ಶನಿವಾರ –  ಬೆಳಗ್ಗೆ 7ಕ್ಕೆ ಚೌಚೌ ಬಾತ್, ಬೆಳಗ್ಗೆ 10ಕ್ಕೆ ಕರಬೂಜ ಹಣ್ಣು, ಟೊಮ್ಯಾಟೊ ಸೂಪ್

ಭಾನುವಾರ – ಬೆಳಗ್ಗೆ 7ಕ್ಕೆ ಸೆಟ್ ದೋಸೆ, ಬೆಳಗ್ಗೆ 10ಕ್ಕೆ ಪಪ್ಪಾಯ ಹಣ್ಣು, ರವೆ ಗಂಜಿ

ಫ್ಲೇವರ್ಡ್ ಮಿಲ್ಕ್ ಕಡ್ಡಾಯ

ಪ್ರತಿನಿತ್ಯ ಮೊಟ್ಟೆ, ಫ್ಲೇವರ್ಡ್ ಮಿಲ್ಕ್ ಕಡ್ಡಾಯ ಕಡ್ಡಾಯವಾಗಿದೆ. ಪ್ರತಿ ದಿನ ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಆಹಾರ ಒದಗಿಸಬೇಕು. ಅಲ್ಲದೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು. ಪ್ರತಿ ವ್ಯಕ್ತಿಗೆ ಆಹಾರದ ವೆಚ್ಚಕ್ಕಾಗಿ 250 ರೂ.ಮೀರದಂತೆ ಕ್ರಮ ವಹಿಸಬೇಕು. ಈ ಮೊತ್ತವನ್ನು ಎಆರ್‍ಎಸ್ ನಿಧಿಯಿಂದ, ಜಿಲ್ಲಾಧಿಕಾರಿಗಳ ಅಧೀನದ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮೊದಲು ನೀಡುತ್ತಿದ್ದ ಆಹಾರವೇನು?

 ಈ ಮೊದಲು ಮೊಟ್ಟೆ, ಚಪಾತಿ, ಅನ್ನ, ತರಕಾರಿ, ರಾಗಿಮುದ್ದೆ, ಮೊಸರು, ಹಣ್ಣುಗಳನ್ನು ನೀಡಲಾಗುತ್ತಿತ್ತು.






























































































































































































































error: Content is protected !!
Scroll to Top