ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಇಸ್ರೇಲ್‌ ನಿರ್ಧಾರ

ಮುಂಬೈ : ಭಾರತ ಮತ್ತು ಇಸ್ರೇಲ್‌ ನಡುವೆ ಬೆಳೆಯುತ್ತಿರುವ ಸಾಂಸ್ಕೃತಿಕ ಸಂಬಂಧಗಳ ಮಧ್ಯೆ, ದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಇಸ್ರೇಲ್ ಘೋಷಿಸಿದೆ. ಕಳೆದ ವಾರ ಶಿವರಾಜ್ಯಾಭಿಷೇಕ ದಿನ ಸಂದರ್ಭದಲ್ಲಿ ಮುಂಬೈನಲ್ಲಿರುವ ಇಸ್ರೇಲ್‌ನ ಕಾನ್ಸುಲ್ ಜನರಲ್ ಯಾನಿವ್ ರೇವಾಚ್ ಈ ಘೋಷಣೆ ಮಾಡಿದ್ದಾರೆ.

ಭಾರತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರಭಾವ ಏನು ಮತ್ತು ಅವರು ಎಷ್ಟು ಮುಖ್ಯ ಎಂಬುದನ್ನು ನಾವು ನಿಖರವಾಗಿ ಅರ್ಥಮಾಡಿಕೊಂಡಿದ್ದೇವೆ. ಮಹಾರಾಜರ ದೊಡ್ಡ ಪ್ರತಿಮೆಯನ್ನು ನಿರ್ಮಿಸಿ ಇಸ್ರೇಲ್‌ಗೆ ಕಳುಹಿಸುವುದು ನಮ್ಮ ಉದ್ದೇಶವಾಗಿದೆ. ಇದು ಕೇವಲ ನಿಯಮಿತ ಯೋಜನೆಗಿಂತ ಹೆಚ್ಚಿನದಾಗಿರುತ್ತದೆ. ಈ ಯೋಜನೆಯ ಮೂಲಕ ಭಾರತೀಯರು ತಮ್ಮ ಇಸ್ರೇಲಿ ಗೆಳೆಯರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ನಾವು ಆ ಪ್ರತಿಮೆಯನ್ನು ಇಸ್ರೇಲ್‌ನ ಪ್ರಮುಖ ನಗರದಲ್ಲಿ ಸ್ಥಾಪನೆ ಮಾಡಲಿದ್ದೇವೆ ಎಂದು ಯಾನಿವ್ ರೇವಾಚ್ ಹೇಳಿದ್ದಾರೆ.

ಮುಂದುವರೆದು, ಶಿವಾಜಿಯ ಪರಂಪರೆಗೆ ಪೂರಕವಾಗಿ ಸ್ಮಾರಕವನ್ನು ಯೋಗ್ಯವಾಗಿಸಲು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಂದ ಐತಿಹಾಸಿಕ ಉಲ್ಲೇಖಗಳು, ಕಲಾತ್ಮಕ ಸಮಾಲೋಚನೆ ಮತ್ತು ವಿನ್ಯಾಸ ಪರಿಗಣನೆಗಳಿಗೆ ಸಂಬಂಧಿಸಿದಂತೆ ಇಸ್ರೇಲ್‌ ಸಹಕಾರ ಕೋರಿದೆ ಮತ್ತು ಅವರು ತಕ್ಷಣ ಅದನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ ಎಂದು ರೇವಾಚ್ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಫಡ್ನವಿಸ್‌ ಅವರಿಗೆ ಬರೆದ ಪತ್ರದಲ್ಲಿ, “ಇಸ್ರೇಲ್‌ನಲ್ಲಿ ಸ್ಥಾಪನೆಯಾಗಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯು ಇಸ್ರೇಲ್ ಮತ್ತು ಭಾರತದ ನಡುವಿನ ನಿಕಟ ಸಂಬಂಧಗಳ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಂಬುತ್ತೇವೆ. ಮಹಾರಾಷ್ಟ್ರ ಮತ್ತು ಭಾರತೀಯ ಯಹೂದಿ ಸಮುದಾಯದ ನಡುವಿನ ಐತಿಹಾಸಿಕ ಸಂಪರ್ಕಗಳನ್ನು ಗಮನಿಸಿದರೆ, ಅಂತಹ ಸ್ಮಾರಕವು ವಿಶೇಷವಾಗಿ ಅರ್ಥಪೂರ್ಣವಾಗಿರುತ್ತದೆ. ಶಿವಾಜಿ ವಂಶಸ್ಥರಲ್ಲಿ ಅನೇಕರು ಇಂದು ಇಸ್ರೇಲಿ ಸಮಾಜಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ” ಎಂದು ರೇವಾಚ್‌ ಉಲ್ಲೇಖಿಸಿದ್ದಾರೆ.

ಈ ಉಪಕ್ರಮಕ್ಕೆ ಮಹಾರಾಷ್ಟ್ರ ಸಿಎಂ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ಇದು ದೊಡ್ಡ ಸುದ್ದಿ! ಶಿವರಾಜ್ಯಾಭಿಷೇಕ ದಿನದ ಶುಭ ಸಂದರ್ಭದಲ್ಲಿ, ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಸ್ಥಾಪಿಸುವ ಈ ಐತಿಹಾಸಿಕ ಘೋಷಣೆಗಾಗಿ, ಇಸ್ರೇಲ್ ಸಿಜಿ ಯಾನೀವ್ ರೇವಾಚ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಐತಿಹಾಸಿಕ ಉಪಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಜೈ ಭವಾನಿ, ಜೈ ಶಿವಾಜಿ!” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.













































\















error: Content is protected !!
Scroll to Top