ಕಾರ್ಕಳ : ಜೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್-5 ರಿಯಾಲಿಟಿ ಶೋ ವಿನ್ನರ್ ಆಗಿ ಹಿರ್ಗಾನ ಗ್ರಾಮದ ರಿಷಿಕಾ ಕುಂದೇಶ್ವರ ಅವರು ಟ್ರೋಫಿ ಗೆದ್ದಿದ್ದಾರೆ.
ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್ನಲ್ಲಿ ರಿಷಿಕಾ ಅತಿ ಹೆಚ್ಚು ಅವಾರ್ಡ್ಗಳೊಂದಿಗೆ ಫೈನಲ್ಗೆ ಲಗ್ಗೆ ಹಾಕಿದ್ದರು. ರಿಷಿಕಾ ಅವರು ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.
ಬಹುಮುಖ ಪ್ರತಿಭೆ
ಬಹುಮುಖ ಪ್ರತಿಭೆಯಾಗಿರುವ ರಿಷಿಕಾ ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನ ಹೇಳುತ್ತಾ ಭಕ್ತಿಯ ಪರಾಕಾಷ್ಠೆ ತೋರಿದ್ದರು. ತೀರ್ಪುಗಾರರಾದ ರವಿಚಂದ್ರನ್, ಲಕ್ಷ್ಮೀ, ರಚಿತಾರಾಮ್, ರಂಗ ಮೇಷ್ಟ್ರು ಅರುಣ್ ಸಾಗರ್, ರಾಜು ತಾಳಿಕೋಟೆ ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದರು.
ರಿಷಿಕಾ ಜೊತೆಗೆ ಜಂಟಿಯಾಗಿ ಕುಣಿಗಲ್ನ ವಿಷ್ಣು ಚಾಂಪಿಯನ್ ಟ್ರೋಫಿ ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ಮಹಾಲಕ್ಷ್ಮಿ ಹಾಗೂ ಸೆಕೆಂಡ್ ರನ್ನರ್ ಅಪ್ ಟ್ರೋಫಿಯನ್ನು ಇಂಚರ ಗೆದ್ದುಕೊಂಡಿದ್ದಾರೆ.