ದಿಲ್ಲಿ, ಅ.16: ಕೊರೊನಾ ಸೋಂಕು ಅಂಕೆಯಿಲ್ಲದೆ ಹೆಚ್ಚುತ್ತಿರುವ ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಕೇಂದ್ರ ಸರಕಾರ ಉನ್ನತ ಮಟ್ಟದ ತಜ್ಞರ ತಂಡಗಳನ್ನು ರಚಿಸಿದೆ. ಕೇರಳ, ಛತ್ತೀಸ್ಘಡ, ರಾಜಸ್ಥಾನ, ಪ.ಬಂಗಾಳ ಇನ್ನುಳಿದ ನಾಲ್ಕು ರಾಜ್ಯಗಳು.
ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಚಿಸಿದ ಉನ್ನತ ಮಟ್ಟದ ತಜ್ಞರ ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯದ ನೊಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ವಿಚಾರಗಳ ಕಾಳಜಿ ವಹಿಸಲು ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲು ಓರ್ವ ವೈದ್ಯನನ್ನು ಒಳಗೊಂಡಿದೆ. ಜೊತೆಗೆ ಪ್ರತಿ ರಾಜ್ಯ ಅನುಭವಿಸುತ್ತಿರುವ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೋಕಾಲ್ ಅನ್ನು ಒಳಗೊಂಡಿರಲಿದೆ ಎಂದೂ ಕೇಂದ್ರ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.
ಸೋಂಕು ನಿಯಂತ್ರಣ, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ, ಕಣ್ಗಾವಲು, ನಿಯಂತ್ರಣ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಹತೋಟಿಗೆ ತರುವಲ್ಲಿ ಆಯಾ ತಂಡಗಳು ತಮಗೆ ನಿರ್ದೇಶಿಸಲಾದ ರಾಜ್ಯಗಳಿಗೆ ಸೂಕ್ತ ಬೆಂಬಲ ನೀಡಲಿವೆ. ಸಮಯೋಚಿತವಾಗಿ ರೋಗ ನಿರ್ಣಯ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು, ಅದರ ಪರಿಣಾಮಕಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಈ ತಂಡಗಳು ರಾಜ್ಯಗಳಿಗೆ ಮಾರ್ಗದರ್ಶನ ನೀಡಲಿದೆ ಎಂದೂ ಸಚಿವಾಲಯವು ಹೇಳಿದೆ.